ಚೈತ್ರಾ ಕುಂದಾಪುರ ಬೀದಿ ಹೆಣವಾಗಬೇಕು: ಮಂಗಳೂರು ಮುಸ್ಲಿಮ್ಸ್ ಪೋಸ್ಟ್

Public TV
2 Min Read

ಮಂಗಳೂರು: ದುರ್ಗಾವಾಹಿನಿ ಭಯೋತ್ಪಾದಕಿ ಚೈತ್ರಾ ಕುಂದಾಪುರ ಬೀದಿ ಹೆಣವಾಗಬೇಕೆಂದು ಮಂಗಳೂರು ಮುಸ್ಲಿಮ್ಸ್ ಹೆಸರಿನಲ್ಲಿರುವ ಫೇಸ್‍ಬುಕ್ ಖಾತೆ ಪೋಸ್ಟ್ ಮಾಡಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬುಧವಾರ ಹಿಂದೂ ಜಾಗರಣ ವೇದಿಕೆ ಮತ್ತು ಚೈತ್ರಾ ಕುಂದಾಪುರ ನಡುವಿನ ತಿಕ್ಕಾಟದ ಕುರಿತಂತೆ ಮುಂಗಳೂರು ಮುಸ್ಲಿಮ್ಸ್, ಈ ಮಾರಾಮಾರಿ ಚೈತ್ರಾ ಕುಂದಾಪುರ ಬೀದಿ ಹೆಣವಾಗುವ ತನಕ ಹೋಗಲಿ ಎಂದು ಅಲ್ಲಾಹುನಲ್ಲಿ ಬೇಡಿ ಕೊಳ್ಳುತ್ತೇನೆ ಎಂದು ವಿವಾದಾತ್ಮಕ ಪೋಸ್ಟ್ ಪ್ರಕಟಿಸಿದೆ.

ಪೋಸ್ಟ್ ನಲ್ಲಿ ಏನಿದೆ?
ದುರ್ಗಾವಾಹಿನಿ ಭಯೋತ್ಪಾದಕಿ ಚೈತ್ರಾ ಕುಂದಾಪುರ ಬೆಂಬಲಿಗರಿಂದ ಹಿಂದೂ ಜಾಗರಣ ವೇದಿಕೆಯ ಗುರುಪ್ರಸಾದ್ ಪೂಂಜಾ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ನಿನ್ನ ಅಹಂಕಾರಕ್ಕೆ ಇಲ್ಲಿಂದಲೇ ಅಂಕುಶ ಬೀಳಲಿ. ಹಿಂದುತ್ವವಾದಿಗಳೇ ನೀವೇ ಇವಳ ಕೈ ಕಾಲು ಮುರಿಯಿರಿ ನಿಮಗೆ ನಮ್ಮ ಬೆಂಬಲವಿದೆ. ದೇವಸ್ಥಾನದ ಆಸ್ತಿಯ ವಿಷಯಕ್ಕೆ ಸಂಬಂಧಿಸಿ ಅಧಿಕ ಪ್ರಸಂಗ ಮಾಡಿದ 3 ಕಾಸಿನ ಬೀದಿ ಹೆಣ್ಣು ನಾಯಿಗೆ ಅಡ್ಡ ಗಟ್ಟಿ ತರಾಟೆಗೆ ತೆಗೆದುಕೊಂಡಾಗ ಬಿದ್ದ ಒದೆಗಳು ನೋಡಿ ಬಹಳ ಸಂತೋಷವಾಗಿದೆ.

ಚೈತ್ರಾಳಿಗೆ ಬಿದ್ದ ಒದೆಗಳಿಂದ ಕೆರಳಿದ ಚೈತ್ರಾ ಸಂಗಡಿಗರು ತಮ್ಮ ವಾಹನದಲ್ಲಿ ಬಿಚ್ಚಿಟ್ಟಿದ್ದ ಮಾರಾಕಾಯುಧಗಳಿಂದ ದೇಶ ದ್ರೋಹಿ ಹಿಂದುತ್ವವಾದಿ ಭಯೋತ್ಪಾದಕರ ಇನ್ನೊಂದು ಸಂಘಟನೆಯಾದ ಹಿಂದೂ ಜಾಗರಣ ವೇದಿಕೆಯ ಗುರುಪ್ರಸಾದ್ ಪೂಂಜಾ ಅವರ ಮೇಲೆ ದಾಳಿ ಮಾಡಿದ್ದಾರೆ. ಈ ಮಾರಾಮಾರಿ ಚೈತ್ರಾ ಕುಂದಾಪುರ ಬೀದಿ ಹೆಣವಾಗುವ ತನಕ ಹೋಗಲಿ ಎಂದು ಅಲ್ಲಾಹುನಲ್ಲಿ ಬೇಡಿ ಕೊಳ್ಳುತ್ತೇನೆ ಎಂದು ಬರೆಯಲಾಗಿದೆ.

ಬುಧವಾರ ಏನಾಗಿತ್ತು?
ಕಳೆದ ಎರಡು ತಿಂಗಳಿಂದ ವಿವಾದಕ್ಕೆ ಕಾರಣವಾಗಿದ್ದ ಸುಬ್ರಹ್ಮಣ್ಯ ಮಠ ಮತ್ತು ದೇವಸ್ಥಾನದ ಸಂಘರ್ಷ ಮೊನ್ನೆ ನವರಾತ್ರಿಯ ಮಧ್ಯೆ ಮಠದ ಸ್ವಾಮೀಜಿ ಉಪವಾಸ ಕುಳಿತಿದ್ದು ದೊಡ್ಡ ರಾದ್ಧಾಂತಕ್ಕೆ ಎಡೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಹಾಗೆಯೇ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಚೈತ್ರಾ ಕುಂದಾಪುರ ಮತ್ತು ಸುಬ್ರಹ್ಮಣ್ಯದ ಹುಡುಗರ ಮಧ್ಯೆ ಭಾರೀ ವಾಕ್ಸಮರ ನಡೆದಿತ್ತು.

ಆ ಕಡೆಯಿಂದ ಕುಂದಾಪುರಕ್ಕೆ ಬಂದರೆ ನೋಡಿಕೊಳ್ತೀನಿ ಅಂದಿದ್ರೆ, ಈ ಕಡೆಯಿಂದ ಸುಬ್ರಹ್ಮಣ್ಯಕ್ಕೆ ಬಂದರೆ ನೋಡ್ತೀವಿ ಅಂತಾ ಸವಾಲು ಕೂಡ ಆಗಿತ್ತು. ಇತ್ತ ವಾಟ್ಸಪ್ ಸವಾಲು ಸ್ವೀಕರಿಸಿದ ಚೈತ್ರಾ ಕುಂದಾಪುರದ ತನ್ನ ಹುಡುಗರನ್ನು ಕಟ್ಟಿಕೊಂಡು ಸ್ವಾಮೀಜಿಯನ್ನು ಕಾಣುವ ನೆಪದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಳು.

ಈ ವಿಚಾರ ತಿಳಿದು ಚೈತ್ರಾಳನ್ನು ಪ್ರಶ್ನೆ ಮಾಡಲು ಬಂದಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಅಂಗಳದಲ್ಲಿಯೇ ಬೀದಿ ಕಾಳಗ ನಡೆದಿದೆ. ಚೈತ್ರಾ ಮತ್ತು ಹುಡುಗರು ರಾಡ್ ಹಿಡ್ಕೊಂಡು ಹಿಂದೂ ಜಾಗರಣ ವೇದಿಕೆಯ ಸುಳ್ಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜ ಎಂಬಾತನ ಮೇಲೆ ಹಲ್ಲೆ ನಡೆಸಿದ್ದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಚಾರ ತಿಳಿದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕಾಗಮಿಸಿ, ಲಾಠಿಚಾರ್ಜ್ ನಡೆಸಿ ಎರಡು ಗುಂಪನ್ನು ಚದುರಿಸಿದ್ದಾರೆ. ಸಂಜೆ ಹೊತ್ತಿಗೆ ಚೈತ್ರಾ ನಡೆಸಿದ ದರ್ಪ ಮತ್ತು ರಾಡಿನಲ್ಲಿ ಹಲ್ಲೆ ನಡೆಸಿದ್ದು ಸ್ಥಳೀಯರ ಮೊಬೈಲಿನಲ್ಲಿ ಸೆರೆಯಾಗಿದೆ. ತಲೆಗೆ ಗಂಭೀರ ಗಾಯಗೊಂಡ ಗುರುಪ್ರಸಾದ್ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ಲಾಠಿಚಾರ್ಜ್ ಮಾಡಿ ಗುಂಪು ಚದುರಿಸಿದ್ದ ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *