ಜೈಲಿನಲ್ಲಿದ್ದ ಪ್ರೇಮಿಗೆ ಗಾಂಜಾ ಪೂರೈಕೆ ಮಾಡಲು ಹೋಗಿ ಸಿಕ್ಕಿ ಬಿದ್ದ ಮಂಗ್ಳೂರು ಎಂಸಿಜೆ ವಿದ್ಯಾರ್ಥಿನಿ!

Public TV
2 Min Read

ಮಂಗಳೂರು: ಕೊಲೆ, ಕೊಲೆಯತ್ನ ಗಂಭೀರ ಪ್ರಕರಣದಡಿ ಜೈಲು ಸೇರಿರುವ ಕೈದಿಯೊಬ್ಬನಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದಾಗ ಎಂಸಿಜೆ ವಿದ್ಯಾರ್ಥಿನಿಯೊಬ್ಬಳು ಸಿಕ್ಕಿಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿನಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವತಿ. ಪ್ರಿಯಕರನ್ನು ನೋಡಲು ಬಂದಿದ್ದ ಯುವತಿ 20 ಗ್ರಾಂ ಗಾಂಜಾ ಮತ್ತು ಮೊಬೈಲ್ ನೀಡುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿ ಆದ ಕಾರಣ ಪೋಷಕರಿಗೆ ಮಾಹಿತಿ ನೀಡಿ ಬಿಡುಗಡೆಗೊಳಿಸಿದ್ದಾರೆ.

ವಾಮಂಜೂರಿನಲ್ಲಿ 2015ರಂದು ಚರಣ್ ಕೊಲೆ ಮತ್ತು ಹಫ್ತಾಕ್ಕಾಗಿ ಖಾಲಿದ್ ಎಂಬಾತನ ಕೊಲೆಯತ್ನ ಪ್ರಕರಣದ ಆರೋಪಿ ಮುಸ್ತಫ್ ಜೈಲು ಸೇರಿದ್ದ. ಮುಸ್ತಾಫ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಸಿಜೆ ವಿಭಾಗದ (ಸುಳ್ಯ ಮೂಲದ) ಹುಡುಗಿಯನ್ನು ಪ್ರೀತಿಸುತ್ತಿದ್ದ.

ಪ್ರಿಯಕರ ಮುಸ್ತಫ್ ಬಂಧನಕ್ಕೊಳಗಾಗಿ, ಮಂಗಳೂರಿನ ಜೈಲಿಗೆ ಹೋದ ಬಳಿಕವೂ ವಿದ್ಯಾರ್ಥಿನಿಗೆ ಅಲ್ಲಿಗೆ ಹೋಗಿ ಆಗಾಗ ಭೇಟಿ ಮಾಡುತ್ತಿದ್ದಳು. ಇದೇ ವೇಳೆ ಆಕೆ ಮುಸ್ತಫ್‍ಗೆ ಗಾಂಜಾ ಪ್ಯಾಕೆಟ್ ಪೂರೈಕೆ ಮಾಡುತ್ತಿದ್ದಾಳೆಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.

ಖಚಿತ ಮಾಹಿತಿ ಪಡೆದು ಪೊಲೀಸರು ಆಕೆಯ ಬಂಧನಕ್ಕೆ ಪ್ಲಾನ್ ರೂಪಿಸಿದ್ದರು. ಆಕೆ ಭೇಟಿಗೆ ಬರುತ್ತಿದ್ದಂತೆ ತಡೆದ ಪೊಲೀಸರು ಆಕೆಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಪ್ಯಾಕೆಟ್ ಸಿಕ್ಕಿದೆ. ಈಕೆಗೆ ಗಾಂಜಾ ಪ್ಯಾಕೆಟ್ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

ಪರಿಚಯವಾಗಿದ್ದು ಹೇಗೆ?
ಯುವತಿಗೆ ವಾಮಂಜೂರಿನಲ್ಲಿ ಸಂಬಂಧಿಕರ ಮನೆಯಿದ್ದು, ಅಲ್ಲಿಂದ ನಗರದ ಮಾಧ್ಯಮ ಸಂಸ್ಥೆಯೊಂದಕ್ಕೆ ಇಂಟರ್ನ್‍ಶಿಪ್‍ಗೆ ಹೋಗುತ್ತಿದ್ದಳು. ಈ ಸಮಯದಲ್ಲಿ ನೆರೆಮನೆಯ ಮುಸ್ತಾಫ್ ಎಂಬಾತನ ಪರಿಚಯವಾಗಿ, ಅದು ಪ್ರೀತಿಗೆ ತಿರುಗಿತ್ತು. ಮುಸ್ತಾಫ ಜೈಲು ಸೇರಿದ್ದರೂ ಮೊಬೈಲ್ ಸಂಪರ್ಕ ಮಾತ್ರ ಇವರ ನಡುವೆ ಮುಂದುವರಿದಿತ್ತು ಎಂದು ತಿಳಿದು ಬಂದಿದೆ.

ಲವ್ ಜಿಹಾದ್?
ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಇಂಗಿತವನ್ನೂ ಕಳೆದ ಕೆಲ ದಿನಗಳಿಂದ ಈ ವಿದ್ಯಾರ್ಥಿನಿ ವ್ಯಕ್ತಪಡಿಸಿದ್ದ ಎಂಬ ಮಾಹಿತಿ ಲಭಿಸಿದೆ. ಹೀಗಾಗಿ ಎಂಸಿಜೆ ವಿದ್ಯಾರ್ಥಿನಿಯೊಬ್ಬಳು ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದಳೇ ಎನ್ನುವ ಸಂಶಯ ವ್ಯಕ್ತವಾಗಿದ್ದು ಕರಾವಳಿಯಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *