ಕಾವೇರಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ಯುವಕನೂ ಸಾವು

Public TV
1 Min Read

ಮಂಡ್ಯ: ಕಾವೇರಿ ನದಿಗೆ ಬಿದ್ದಿದ್ದ ಮಗುವನ್ನು ರಕ್ಷಿಸಲು ಹೋಗಿದ್ದ ಯುವಕನು ಕೂಡ ನೀರಿನಲ್ಲಿ ಕೊಚ್ಚಿ ಹೋದ ದುರ್ಘಟನೆ ಶ್ರೀರಂಗಪಟ್ಟಣದ ಗಂಜಾಮ್ ಸಮೀಪದ ಕಾವೇರಿ ಸಂಗಮದಲ್ಲಿ ನಡೆದಿದೆ.

ಬೆಂಗಳೂರು ನಿವಾಸಿಗಳಾದ ಸಲೀಂ (23) ಮತ್ತು ಮುನಾನ್ (3) ಮೃತ ದುರ್ದೈವಿಗಳು. ಪ್ರವಾಸಕ್ಕೆಂದು ಬಂದಿದ್ದಾಗ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಲೀಂ ಕುಟುಂಬ ಸಮೇತ ಪ್ರವಾಸಕ್ಕೆಂದು ಶ್ರೀರಂಗಪಟ್ಟಣದ ಕಾವೇರಿ ಸಂಗಮಕ್ಕೆ ಬಂದಿದ್ದ. ಚಿಕ್ಕ ಮಗು ಮುನಾನ್ ಸ್ನಾನ ಮಾಡುವಾಗ ಕಾಲು ಜಾರಿ ಬಿದ್ದು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ. ಇದನ್ನು ನೋಡಿದ ಸಲೀಂ ತಕ್ಷಣವೇ ನದಿಗೆ ಹಾರಿ ಮಗುವನ್ನು ರಕ್ಷಿಸಲು ಮುಂದಾಗಿದ್ದ. ದುರಾದೃಷ್ಟವಶಾತ್ ನೀರಿನ ರಭಸಕ್ಕೆ ಸಲೀಂ ಕೂಡ ಕೊಚ್ಚಿ ಹೋಗಿದ್ದಾನೆ.

ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿದ ಶ್ರೀರಂಗಪಟ್ಟಣ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಈಜುಗಾರರ ಸಹಾಯದಿಂದ ಸಲೀಂ ಹಾಗೂ ಮುನಾನ್ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *