ಮಂಡ್ಯ: ಇತ್ತ ವಿಶ್ವವಿಖ್ಯಾತ ಮೈಸೂರು ದಸರಾ ಕಳೆಗಟ್ಟಿದೆ. ಈ ಬೆನ್ನಲ್ಲೇ ಇಂದಿನಿಂದ ಮಂಡ್ಯದ ಶ್ರೀರಂಗಪಟ್ಟಣ ದಸರಾ (Srirangapatna Dasara) ಉತ್ಸವಕ್ಕೂ ಚಾಲನೆ ಸಿಗಲಿದೆ.
ಇಂದಿನಿಂದ 4 ದಿನಗಳ ಕಾಲ ನಡೆಯಲಿರುವ ಈ ಉತ್ಸವಕ್ಕೆ ನಟ, ನಿರ್ದೇಶಕ ಟಿ.ಎಸ್ ನಾಗಾಭರಣ ಅವರು ಮಧ್ಯಾಹ್ನ 2:30 ರಿಂದ 3 ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ಉದ್ಘಾಟನೆ ನೆರವೇರಿಸಲಿದ್ದಾರೆ. ಶ್ರೀರಂಗಪಟ್ಟಣದ ಕಿರಂಗೂರು ಬಳಿ ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಇದನ್ನೂ ಓದಿ: ದಸರೆ ಹಬ್ಬ ಮಾತ್ರ ಅಲ್ಲ, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ: ಬಾನು ಮುಷ್ತಾಕ್
ಇದಾದ ಬಳಿಕ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮೂಲಕ ಜಂಬೂಸವಾರಿಗೂ ಚಾಲನೆ ನೀಡಲಾಗುತ್ತದೆ. ಶ್ರೀರಂಗಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಂಬೂಸವಾರಿ ಮೆರವಣಿಗೆ ಸಾಗಲಿದೆ. ಮೈಸೂರು ದಸರಾಕ್ಕೆ ಆಗಮಿಸಿರುವ ಮಹೇಂದ್ರ ಆನೆ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದ್ದಾನೆ. ಇಲ್ಲಿನ ಬನ್ನಿ ಮಂಟಪದಿಂದ ಶುರುವಾಗಿ ಶ್ರೀರಂಗನಾಥ ದೇವಾಲಯದ ವರೆಗೆ ಮೆರವಣಿಗೆ ಸಾಗಲಿದೆ.
ಇನ್ನೂ ಜಂಬೂ ಸವಾರಿಗೆ ವಿವಿಧ ಕಲಾತಂಡಗಳ ಸಾಂಸ್ಕೃತಿಕ ವೈಭವ ಮೆರುಗು ನೀಡಲಿದೆ. ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆ ಕೋಲಾಟ, ಗಾರುಡಿ ಗೊಂಬೆ, ತಮಟೆ, ದೊಣ್ಣೆವರಸೆ, ಡೊಳ್ಳು ಕುಣಿತ, ಕಂಸಾಳೆ, ಕೊಂಬು-ಕಹಳೆ ಹಾಗೂ ಸ್ತಬ್ಧ ಚಿತ್ರಗಳ ಮೆರವಣಿ ನಡೆಯಲಿದೆ. ಇದನ್ನೂ ಓದಿ: ದಸರಾ ವಿಶೇಷ | ಮೈಸೂರು ಸಿಂಗರಿಸಿದ ದೀಪಾಲಂಕಾರ, ಆಹಾರ ಮೇಳಕ್ಕೆ ಚಾಲನೆ
ಸಂಜೆ 6 ಗಂಟೆ ವೇಳೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಸಚಿವ ಚಲುವರಾಯಸ್ವಾಮಿ, ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿ ಪ್ರಮುಖ ಗಣ್ಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: Photo Gallery | ಹೂವು ಚೆಲುವೆಲ್ಲಾ ತನ್ನದೆನ್ನುತ್ತಿದೆ.. ಸಂಗೀತ ಝೇಂಕಾರ ಮನಮುಟ್ಟುತ್ತಿದೆ – ದಸರಾ ಸೊಬಗು ಕಣ್ತುಂಬಿಕೊಳ್ಳಿ