ಅಂಬಿ ಸ್ಟೈಲ್‍ನಲ್ಲೇ ಡೈಲಾಗ್ ಹೇಳಿ ಅಭಿಷೇಕ್ ಮತಯಾಚನೆ

Public TV
1 Min Read

– ಎಚ್‍ಡಿಡಿಗೆ ತಿರುಗೇಟು

ಮಂಡ್ಯ: ಲೋಕಸಭಾ ಕ್ಷೇತ್ರ ಮಂಡ್ಯ ರಣಕಣದಲ್ಲಿ ಮಾತಿನ ಸಮರ ಜೋರಾಗಿದೆ. ತಾಯಿ ಸುಮಲತಾ ಪರ ಶನಿವಾರ ಪ್ರಚಾರದ ಅಖಾಡಕ್ಕೆ ಧುಮುಕಿದ್ದ ಅಭಿಷೇಕ್, ಅಂಬಿ ಸ್ಟೈಲ್‍ನಲ್ಲೇ `ಅಂತ’ ಸಿನಿಮಾದ ಡೈಲಾಗ್ ಹೇಳಿ ಮತಯಾಚಿಸಿದ್ರು.

`ಕುತ್ತೆ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ’ ಎಂದು ಡೈಲಾಗ್ ಹೇಳಿ 18ಕ್ಕೆ ಸುಮಲತಾ ಅಂಬರೀಶ್ ಬೋಲೋ ಅಂದ್ರು. ಅಭಿಷೇಕ್ ಡೈಲಾಗ್‍ಗೆ ಅಭಿಮಾನಿಗಳು ಕೂಡ ದನಿಗೂಡಿಸಿದರು.

ಹೊಳೆ ಆಂಜನೇಯಸ್ವಾಮಿ ದೇವಾಲಯಕ್ಕೆ ನಟ ಅಭಿಷೇಕ್ ಅಂಬರೀಶ್ ಭೇಟಿ ನೀಡಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನವಮಿ ಆಗಿದ್ದರಿಂದ ವಿಶೇಷ ಪೂಜೆ ಸಲ್ಲಿಸಲು ಬಂದಿದ್ದೇನೆ ಅಂದ್ರು. ಇದೇ ವೇಳೆ ಸುಮಲತಾ ಬಗ್ಗೆ ಸಂಸದ ಶಿವರಾಮೇಗೌಡ ಮಾಯಾಂಗನೆ ಪದ ಬಳಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ನಾನು ಹಾಗೆ ಮಾತನಾಡಲು ಹೋಗಲ್ಲ ಎಂದರು.

ಅಂಬರೀಶ್ ಮಂಡ್ಯದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬ ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಅಭಿಷೇಕ್, ಅಂಬರೀಶ್ ಮಂಡ್ಯದಲ್ಲಿ ಕೆಲಸ ಮಾಡಿದ್ದಾರಾ? ಇಲ್ಲವಾ? ಎಂಬುದನ್ನು ಮಂಡ್ಯ ಜನ ತೀರ್ಮಾನ ಮಾಡ್ತಾರೆ ಎಂದು ಹೇಳುವ ಮೂಲಕ ಎಚ್‍ಡಿಡಿಗೆ ತಿರುಗೇಟು ನೀಡಿದ್ರು.

ಇತ್ತ ಸಂಸದ ಶಿವರಾಮೇಗೌಡ, ಚುನಾವಣೆ ಆದ ಬಳಿಕ ಸುಮಲತಾ, ದರ್ಶನ್, ಯಶ್ ನಿಮ್ಮ ಕಷ್ಟ ಸುಖಕ್ಕೆ ಆಗ್ತಾರಾ, ಅವರೆಲ್ಲಾ 18ಕ್ಕೆ ಪ್ಯಾಕಪ್ ಎಂದು ವ್ಯಂಗ್ಯವಾಡಿದ್ರು. ಶಾಸಕ ಸುರೇಶ್ ಗೌಡ, ಪಿಕ್ಚರ್‍ನವರು ಪಿಕ್ಚರ್‍ನವರೇ.. ಅಂಬರೀಶ್ ಇದ್ದಾಗ ಜನರ ಕಷ್ಟ, ಸುಖ ಕೇಳಲು ಬರಲಿಲ್ಲ. ಇವತ್ತು ಕಣ್ಣೀರು ಸುರಿಸಿಕೊಂಡು ಮತ ಕೇಳುತ್ತಿದ್ದಾರೆ. ಯಶ್, ದರ್ಶನ್ ಅವರ ಮಗ ಯಾರೂ ಚುನಾವಣೆ ಬಳಿಕ ಸಿಗಲ್ಲ. ಅವರ ಫೋನ್ ನಂಬರ್ ಸಿಕ್ಕಿದ್ರೆ ನೀವೇ ಪುಣ್ಯವಂತರು ಎಂದು ನಿಖಿಲ್ ಪರ ಮತಯಾಚಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *