ಹಣೆ ಮೇಲಿನ ಕುಂಕುಮ ಒರೆಸಿ ಸಿಎಂ ಆಜ್ಞೆ ಪಾಲಿಸಿದ್ರು ಸಚಿವ ಸಿ.ಎಸ್.ಪುಟ್ಟರಾಜು

Public TV
1 Min Read

ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹಣೆಗೆ ಹಚ್ಚಿದ್ದ ಕುಂಕುಮವನ್ನು ಒರೆಸುವ ಮೂಲಕ ನಾಯಕನ ಆಜ್ಞೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಪಾಲಿಸಿದ್ದಾರೆ.

ಇಂದು ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಬಸ್ಸುಗಳಿಗೆ ಚಾಲನೆ ನೀಡುವಾಗ ಅರ್ಚಕರು ಎಚ್.ಡಿ.ಕುಮಾರಸ್ವಾಮಿ ಹಣೆಗೆ ಕುಂಕುಮ ಇಟ್ಟಿದ್ದರು. ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದರು, ಈ ವೇಳೆ ಬೆವರು ಬರುತ್ತಿದೆ, ಕುಂಕುಮ ಒರೆಸಿ ಎಂದು ಪಕ್ಕದಲ್ಲಿಯೇ ಕುಳಿತ್ತಿದ್ದ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಕುಮಾರಸ್ವಾಮಿ ಅವರು ಕೇಳಿದ್ದಾರೆ.

ಸಿಎಂ ಕುಮಾರಸ್ವಾಮಿ ಹೇಳುತ್ತಿದ್ದಂತೆ ಪುಟ್ಟರಾಜು ಅವರು ತಮ್ಮ ಟವಲ್‍ನಿಂದ ಕುಂಕುಮ ಒರೆಸಿದ್ದಾರೆ. ಸಭೆಯ ಬಳಿಕ ಕುಮಾರಸ್ವಾಮಿ ಹೊರ ಬರುತ್ತಿದ್ದಂತೆ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳು ಅಧಿಕಾರಿಗಳು ತಾ ಮುಂದು ನಾ ಮುಂದು ಅಂತ ನೂಕಾಟಕ್ಕೆ ಮುಂದಾದರು.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಲ್ಲ. ಅಲ್ಲದೇ 20 ಸಾವಿರ ಜನಸಂಖ್ಯೆ ಒಂದು ಅಂಗಡಿಯಂತೆ ಎಂಬುದು ನಮ್ಮ ಸರ್ಕಾರದ ನಿಯಮವಲ್ಲ. ಇದು 25 ವರ್ಷದ ಹಿಂದಿನ ನಿಯಮ. ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ದೇನೆ, ಅವರು ಅಬಕಾರಿ ಇಲಾಖೆಗೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

2014-15ರಲ್ಲಿ ಅಂದಿನ ಆಯುಕ್ತರು ಮದ್ಯದ ಅಂಗಡಿ ತೆರೆಯಲು ವರದಿ ಸಲ್ಲಿಸಿದ್ದರು. ಈಗಿರುವ ಆಯುಕ್ತರಿಗೂ ನಾನು ಏನನ್ನೂ ಸೂಚಿಸಿಲ್ಲ. ನನ್ನ ವಿರುದ್ಧ ಆಟ ಆಡಬೇಡಿ, ನಾನು ಜನರ ಮಧ್ಯೆ ಇರುವವನು. ಈ ರೀತಿ ಅಂಗಡಿ ತೆರೆದು ನಾನು ಸಾಲ ಮನ್ನಾ ಮಾಡುವುದಕ್ಕೆ ಹಣ ಸಂಗ್ರಹ ಮಾಡುವವನಲ್ಲ. ನನ್ನ ಒಳ್ಳೆಯ ಕೆಲಸಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಮಾಧ್ಯಮಗಳ ವಿರುದ್ಧ ಗರಂ ಆಗಿ ಪ್ರತಿಕ್ರಿಯೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Share This Article
1 Comment

Leave a Reply

Your email address will not be published. Required fields are marked *