ರೆಸಾರ್ಟ್ ರಾಜಕಾರಣ ಮಾಡಿದ್ರೆ ಕತ್ತಿನ ಪಟ್ಟಿ ಹಿಡಿದು ಬುದ್ಧಿ ಕಲಿಸಬೇಕಾಗುತ್ತೆ: ಮಂಡ್ಯ ರೈತರು

Public TV
1 Min Read

ಮಂಡ್ಯ: ರೈತರ ಸಮಸ್ಯೆ ಬಗೆ ಹರಿಸೋದು ಬಿಟ್ಟು ಹೀಗೆ ರೆಸಾರ್ಟ್ ರಾಜಕಾರಣ ಮಾಡುತ್ತ ಕುಳಿತರೆ ನಿಮ್ಮ ಕತ್ತಿನ ಪಟ್ಟಿ ಹಿಡಿದು ಬುದ್ಧಿ ಕಲಿಸಬೇಕಾಗುತ್ತದೆ ಎಂದು ಜನಪ್ರತಿನಿಧಿಗಳಿಗೆ ಮಂಡ್ಯ ರೈತರು ಎಚ್ಚರಿಕೆ ನೀಡಿದ್ದಾರೆ.

ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇಂದು ಮಂಡ್ಯದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ ರೈತರು, ಸರ್ಕಾರದ ನಡೆ ವಿರುದ್ಧ ಆಕ್ರೋಶ ಹೊರಹಾಕಿದರು. ಅಧಿಕಾರದ ಸಲುವಾಗಿ ರೆಸಾರ್ಟ್ ಸೇರಿರುವ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಅಸಮಾಧಾನವನ್ನು ರೈತರು ಹೊರಹಾಕಿದ್ದಾರೆ.

ಈ ಮೈತ್ರಿ ಸರ್ಕಾರದಲ್ಲಿ ಜನರ ಕಷ್ಟಗಳಿಗೇ ಸ್ಪಂದಿಸುವ ಕೆಲಸ ಆಗುತ್ತಿಲ್ಲ. ಅಧಿಕಾರವನ್ನು ಉಳಿಸಿಕೊಳ್ಳಲು ಎಲ್ಲರೂ ರೆಸಾರ್ಟ್ ರಾಜಕಾರಣ ಮಾಡುತ್ತಿದ್ದಾರೆ. ಇದರ ಜೊತೆ ವಿರೋಧ ಪಕ್ಷಕ್ಕೂ ರಾಜ್ಯದ ರೈತರ ಸಮಸ್ಯೆ ಬೇಕಾಗಿಲ್ಲ. ಅವರು ಕೂಡ ಅಧಿಕಾರವನ್ನು ಹಿಡಿಯಲು ಓಡಾಡುತ್ತಿದ್ದಾರೆ. ನಮ್ಮ ನಾಡಿನ ಜನ ಎಚ್ಚೆತ್ತು ಚುನಾವಣೆ ಸಮಯದಲ್ಲಿ ಮನೆ ಬಳಿ ಬರುವ ರಾಜಕಾರಣಿಗಳಿಗೇ ಬುದ್ಧಿ ಕಲಿಸಬೇಕು. ಯಾವುದೇ ಪಕ್ಷದವರು ಆಗಲಿ ಮೊದಲು ಜನರ ಕಷ್ಟವನ್ನು ಆಲಿಸಿ ನಂತರ ಅವರು ರಾಜಕಾರಣ ಮಾಡಲಿ ಎಂದು ರೈತರು ಜನಪ್ರತಿನಿಧಿಗಳಿಗೆ ಕ್ಲಾಸ್ ತೆಗೆದುಕೊಂಡರು.

ನಿಮಗೆ ವೋಟ್ ಹಾಕಿರೋದು ಯಾಕೆ? ಇಲ್ಲಿ ನೀರಿಲ್ಲದೆ ನಮ್ಮ ಬೆಳೆಗಳು ಒಣಗುತ್ತಿವೆ. ನೀವು ನಮ್ಮ ಕಷ್ಟಕ್ಕೆ ಸ್ಪಂದಿಸದೇ ರೆಸಾರ್ಟ್ ಸೇರಿಕೊಂಡಿದ್ದೀರಿ? ನಿಮಗೆ ಮಾನ ಮರ್ಯಾದೆ ಇಲ್ಲವೇ? ಇದು ಹೀಗೆ ಮುಂದುವರಿದರೆ ನಿಮ್ಮ ಕತ್ತಿನ ಪಟ್ಟಿ ಹಿಡಿದು ಬುದ್ಧಿ ಕಲಿಸಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *