ಮೋದಿ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲಾಡಳಿತ ಸಿದ್ಧತೆ

Public TV
2 Min Read

ಮಂಡ್ಯ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಬೆಂಗಳೂರು – ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು (Bengaluru Mysuru Expressway) ಮಾ. 12ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮಂಡ್ಯದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಿಂದ (Bengaluru) ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ನಡುವಿನ ಸಂಚಾರ ಸುಗಮವಾಗಿ ಇರಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ 118 ಕಿ.ಮೀ ಬೆಂಗಳೂರು ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯನ್ನು 11 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಕಾಮಗಾರಿ ಬಹುಪಾಲು ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾ. 12ರಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮೊಟ್ಟಮೊದಲ ಬಾರಿಗೆ ಮೋದಿ ಅವರು ಮಂಡ್ಯಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಬರದಿಂದ ಮಾಡಿಕೊಳ್ಳುತ್ತಿದೆ.

ಭಾನುವಾರದ ಮೋದಿ ಅವರು ದೆಹಲಿಯಿಂದ ಮೈಸೂರು ಮಂಡಕಹಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಬಂದಿಳಿದು ಬಳಿಕ ಅಲ್ಲಿಯೇ ಹೆಲಿಕಾಪ್ಟರ್ ಮೂಲಕ ಮಂಡ್ಯಗೆ ಆಗಮಿಸಲಿದ್ದಾರೆ. ಮಂಡ್ಯ ನಗರದ ಹಳೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ 1.8 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. ಮೋದಿ ರೋಡ್ ಶೋ ಹಿನ್ನೆಲೆ ಜಿಲ್ಲಾಡಳಿತ ರಸ್ತೆಯನ್ನು ಶೃಂಗಾರಗೊಳಿಸುತ್ತಿದೆ. ಮುನ್ನೆಚ್ಚರಿಕೆಯಿಂದ ರಸ್ತೆಯ ಬದಿಯಲ್ಲಿ ಇರುವ ಮರಗಳ ಒಣಗಿದ ಮತ್ತು ಬೀಳುವ ಹಂತದಲ್ಲಿ ಇರುವ ರೆಂಬೆ-ಕೊಂಬೆಗಳನ್ನು ಕತ್ತರಿಸಲಾಗಿದೆ. ಇದಲ್ಲದೇ ರಸ್ತೆಯ ಎರಡು ಬದಿಯಲ್ಲಿ‌ ಮರದ ಕೊಂಬುಗಳಿಂದ ಬ್ಯಾರಿಕೇಡ್ ಅವಳಡಿಕೆ ಮಾಡುವುದರ ಜೊತೆಗೆ ರಸ್ತೆಯನ್ನು ಸ್ವಚ್ಛಗೊಳಿಸಿ ವಿಭಜಕಕ್ಕೆ ಬಣ್ಣ ಬಳಿದು ಶೃಂಗಾರ ಮಾಡಲಾಗುತ್ತಿದೆ.

ಮಂಡ್ಯ ನಗರದಲ್ಲಿ ಅದ್ದೂರಿ‌ಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ಮುಗಿಸಿ ನೇರವಾಗಿ ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಗೆ ಬಂದು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ 30 ಎಕರೆ ಪ್ರದೇಶವನ್ನು ಗುರುತಿಸಿದ್ದು, ಇಲ್ಲಿ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡುತ್ತಿದೆ. ಒಂದು ಲಕ್ಷ ಮಂದಿ ಈ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಹೀಗಾಗಿ ಒಂದು ಲಕ್ಷ ಮಂದಿ ಕೂರಲು ಬೃಹತ್ ಜರ್ಮನ್ ಟೆಂಟ್‌ನ್ನು ನೂರಾರು ಕಾರ್ಮಿಕರು ಸಿದ್ಧ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೋದಿ ರೋಡ್ ಶೋಗೆ ಮೊದಲೇ ಸಿದ್ದರಾಮಯ್ಯ ಪರಿಶೀಲನಾ ಯಾತ್ರೆ

ಒಟ್ಟಾರೆ ಸಕ್ಕರೆ ನಾಡು ಮಂಡ್ಯಗೆ ನಮೋ‌ ಬರುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ರೆ, ಇತ್ತ ಬಿಜೆಪಿ ಈ ಬೃಹತ್ ಕಾಮಗಾರಿಯ ಕ್ರೆಡಿಟ್ ಮೂಲಕ ಹಳೆ ಮೈಸೂರು ಭಾಗದಲ್ಲಿ ಚುನಾವಣೆಯ ರಣಕಹಳೆಯನ್ನು ಮೊಳಗಿಸುವ ಲೆಕ್ಕಾಚಾರ ಹಾಕಿಕೊಂಡಿದೆ. ಇದನ್ನೂ ಓದಿ: ಪ್ರೀತಂ ಗೌಡರಿಂದ ಭರಪೂರ ಕೊಡುಗೆ – ಬಾಗಿನ ಹೆಸರಲ್ಲಿ ಸೀರೆ, ಬೆಳ್ಳಿಯ ದೇವರ ಫೋಟೋ ಹಂಚಿಕೆ

Share This Article
Leave a Comment

Leave a Reply

Your email address will not be published. Required fields are marked *