ಜನರ ಮೇಲೆ ಕಾಳಜಿಯಿಲ್ಲ- ಮತ್ತೆ ಸಿಎಂ ವಿರುದ್ಧ ಚಲುವರಾಯಸ್ವಾಮಿ ಗುಡುಗು

Public TV
1 Min Read

ಮಂಡ್ಯ: ಸಿಎಂ ತನ್ನ ಹೆಸರು ಉಳಿಸಿಕೊಳ್ಳಲು ರೇವಣ್ಣ ಅವರ ಹೆಸರನ್ನು ಡ್ಯಾಮೇಜ್ ಮಾಡುತ್ತಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಇದೀಗ ಮತ್ತೆ ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಗುಡುಗಿದ್ದಾರೆ.

ಸಿಎಂ ವಿರುದ್ಧ ಮತ್ತೆ ಆಕ್ರೋಶ ಹೊರಹಾಕಿದ ಮಾಜಿ ಸಚಿವ, ಮಂಡ್ಯದಲ್ಲಿ ನೀರಿಗಾಗಿ ರೈತರು ಹೋರಾಟ ಮಾಡುತ್ತಿದ್ದಾರೆ. ಈ ಜಿಲ್ಲೆಯ ಜನರ ಬಗ್ಗೆ ಸರ್ಕಾರದ ತೀರ್ಮಾನ ಏನು? ಮುಖ್ಯಮಂತ್ರಿ ಮಂಡ್ಯ ಜನರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಜಿಲ್ಲೆಯಲ್ಲಿರುವ ಶಾಸಕರು, ಮಂತ್ರಿಗಳು ಮತ್ತು ಜನರು ಸರ್ಕಾರದ ಜೊತೆ ಚರ್ಚೆ ಮಾಡಿ ಜಿಲ್ಲೆಯ ಸಮಸ್ಯೆ ಪರಿಹರಿಸಲು ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಈಗ ಪ್ರಾಧಿಕಾರದ ಕಡೆ ಕೈ ತೋರಿಸುತ್ತಾರೆ. ಆದರೆ ಜಿಲ್ಲೆಯ ಜನರಿಗೆ ನೀರು ಕೊಡಲು ನಿಮ್ಮ ಪ್ರಯತ್ನ ಏನು ಎಂದು ಪ್ರಶ್ನಿಸಿ, ಮಳೆಯಾಗುವ ನೀರಿಕ್ಷೆಯಿರುವುದರಿಂದ ನಮ್ಮ ರೈತರಿಗೆ ನೀರು ಕೊಟ್ಟು, ತಮಿಳುನಾಡಿಗೂ ಕೊಡುವ ಅವಕಾಶ ಇದೆ ಎಂದರು.

ಜಿಲ್ಲೆಯ ಜನರ ಬಗ್ಗೆ ನಿಮಗೆ ದ್ವೇಷ ಇದೆಯಾ? ರಾಜಕಾರಣ ಏನಾದರೂ ಮಾಡಿ. ಪಕ್ಷಕ್ಕಿಂತ ಹೆಚ್ಚು ನಮಗೆ ಜಿಲ್ಲೆಯ ಜನರ ಬಗ್ಗೆ ಕಾಳಜಿ ಇದೆ. ಸ್ವಾತಂತ್ರ್ಯ ನಂತರ ಮಂಡ್ಯ ಜಿಲ್ಲೆ ಬಗ್ಗೆ ಇಷ್ಟು ತಾತ್ಸಾರ ನೋಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಕೇಳಿದರೆ ನನ್ನನ್ನೇನು ಕೇಳುತ್ತೀರಿ, ಡೆಲ್ಲಿಗೆ ಹೋಗಿ ಎನ್ನುತ್ತಾರೆ. ಹಾಗಾದರೆ ಇವರು ಯಾಕೆ ಇದ್ದಾರೆ. ಜಿಲ್ಲೆಯ ಬಗ್ಗೆ ಇವರಿಗೆ ಏನು ಗೌರವ ಇದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮುಖ್ಯಮಂತ್ರಿ ಆಗಿ ಮುಂದುವರಿಯಲು ವಹಿಸುವ ಕಾಳಜಿಯಷ್ಟೇ ಜಿಲ್ಲೆಯ ಜನರ ಬಗ್ಗೆಯೂ ಕಾಳಜಿ ವಹಿಸಲಿ. ಈ ರೀತಿಯ ಸರ್ಕಾರ ಹಿಂದೆ ಬಂದಿಲ್ಲ, ಮುಂದೆ ಬರೋದು ಇಲ್ಲ ಅನಿಸುತ್ತೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಶಾಸಕರ ರಾಜೀನಾಮೆ ವಿಚಾರ ಬಗ್ಗೆ ಮಾತನಾಡಿದ ಅವರು, ಈ ರೀತಿಯ ರಾಜಕಾರಣ ಎಂದೂ ನೋಡಿಲ್ಲ. ಮುಂದೆ ನೋಡುವ ಪರಿಸ್ಥಿತಿ ಬರೋದು ಬೇಡ. 48 ಗಂಟೆಗಳಲ್ಲಿ ಕೋರ್ಟ್ ತೀರ್ಪಿದೆ. ಆ ನಂತರ ಏನಾಗುತ್ತದೆ ಎಂದು ನೋಡೋಣ. ನಾನೊಬ್ಬ ಕಾಂಗ್ರೆಸ್ ಲೀಡರ್ ಆಗಿರೋದ್ರಿಂದ ಸರ್ಕಾರದ ಬಗ್ಗೆ ನನ್ನ ನಿಜವಾದ ಅಭಿಪ್ರಾಯ ಹೇಳಲು ಆಗಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *