ಕಣ್ಣೆದುರೇ ಮೃತಪಟ್ಟ 5 ವರ್ಷದ ಮಗಳನ್ನು ನೋಡಲು ಸ್ಟ್ರೆಚರ್ ನಲ್ಲಿ ಬಂದ ತಾಯಿ!

Public TV
1 Min Read

ಮಂಡ್ಯ: ಕ್ಯಾಂಟರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮದುವೆಗೆಂದು ಹೊರಟಿದ್ದ 13 ಜನ ಮೃತಪಟ್ಟ ಘಟನೆಯ ಮಧ್ಯೆಯೊಂದು ಮನಕಲಕುವ ಘಟನೆ ನಡೆದಿದೆ.

ಅಪಘಾತದ ಬಳಿಕ ತನ್ನ 5 ವರ್ಷದ ಮಗಳ ಶವವನ್ನು ನೋಡಲು ಗಂಭೀರ ಸ್ಥಿತಿಯಲ್ಲಿರೋ ತಾಯಿ ಸ್ಟ್ರೆಚರ್ ನಲ್ಲೇ ಬಂದಿದ್ದು, ನೆರೆದವರಲ್ಲಿ ಕಣ್ಣೀರು ತರಿಸಿತ್ತು. ಘಟನೆಯಲ್ಲಿ ಮಂಜುಳಮ್ಮ ಎಂಬವರ ಕೈ ಕಾಲು ಮುರಿದಿತ್ತು. ಇವರ ಮಗಳಾದ 5 ವರ್ಷದ ಸೋನು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಳು. ಮೃತಳ ಶವ ಪರೀಕ್ಷೆ ಶವಾಗಾರದಲ್ಲಿ ನಡೆಯುತ್ತಿತ್ತು. ಈ ವೇಳೆ ತಾಯಿ ತನ್ನ ಮಗಳ ಶವವನ್ನು ನೋಡಲು ಶವಾಗಾರಕ್ಕೆ ಬಂದಿದ್ದರು.

ಶವಾಗಾರದ ಮುಂದೆ ಮಗಳ ಶವವನ್ನು ನೋಡಲು ಕಾಯುತ್ತಾ ತಾಯಿ ಮೂಕ ರೋಧನೆ ವ್ಯಕ್ತಪಡಿಸುತ್ತಿದ್ದರು. ಕೊನೆಗೆ ಶವ ಪರೀಕ್ಷೆ ಮುಗಿಸಿ ಬ್ಯಾಂಡೇಜ್ ಸುತ್ತಿದ್ದ ಮಗಳನ್ನು ನೋಡಿದ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಹೆತ್ತ ತಾಯಿಯ ರೋಧನೆ ನೋಡಿ ಸ್ಥಳದಲ್ಲಿದ್ದವರು ಕ್ರೂರ ವಿಧಿಗೆ ಹಿಡಿಶಾಪ ಹಾಕುತ್ತಾ ಕಣ್ಣೀರು ಹಾಕಿದ್ರು.

ಅವಸರದಹಳ್ಳಿ ಗ್ರಾಮದಿಂದ ಮದ್ದೂರಿಗೆ ಕ್ಯಾಂಟರ್ ನಲ್ಲಿ ಮದುವೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾಚಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಶಿವಣ್ಣ(45), ಸೋನ(5), ರೇಣುಕಮ್ಮ(40), ಮೀನಾಕ್ಷಿ(37), ಜಯಮ್ಮ(46), ಪಾರ್ವತಮ್ಮ(48), ಬೀರಮ್ಮ(51), ಸಣ್ಣಮ್ಮ(60), ಮಾದಮ್ಮ(63), ಕಾಳಮ್ಮ(56), ಕಮಲಮ್ಮ(75), ಕರಿಯಪ್ಪ(56), ಪೂಜಾ(18) ಮೃತಪಟ್ಟಿದ್ದಾರೆ. ಸದ್ಯ ಮೃತರ ಶವಪರೀಕ್ಷೆ ಮಂಡ್ಯ ಜಿಲ್ಲಾಸ್ಪತ್ರೆ, ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಘಟನೆಯಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಶಾಸಕ ಯೋಗೇಶ್ವರ್ ಅವರು ಮದ್ದೂರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ರು.

https://www.youtube.com/watch?v=DkTaCz1LovU

 

Share This Article
Leave a Comment

Leave a Reply

Your email address will not be published. Required fields are marked *