ನೀನು ನನಗೆ ಬೇಡ ಎಂದಿದ್ದಕ್ಕೆ 20 ಕಡೆ ಇರಿದು ಪ್ರಿಯತಮೆಯನ್ನು ಬರ್ಬರವಾಗಿ ಕೊಂದೇ ಬಿಟ್ಟ!

Public TV
1 Min Read

ಬೆಂಗಳೂರು: ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೊಹಮದ್ ಮುಬೀನ್ (30) ಬಂಧಿತ ಆರೋಪಿ. ಡಿಸೆಂಬರ್ 26ರಂದು ಸುಂಕದಕಟ್ಟೆಯಲ್ಲಿರುವ ತಸ್ಲಿಮಾ ಬಾನು ಮನೆಯಲ್ಲಿಯೇ ಆಕೆಯ ಕೊಲೆ ನಡೆದಿತ್ತು. ಮುಬೀನ್ ಹಾಗು ಮಹಿಳೆ ಒಂದೇ ಊರಿನವರಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

2006 ರಲ್ಲಿ ಆರೋಪಿ ಮಹಮದ್ ಮುಬೀನ್ ಜೈಲು ಸೇರಿದ್ದ. ಇದಾದ ನಂತರ ತಸ್ಲಿಮಾ ಬಾನುಗೆ ಮನೆಯವರು ಬೇರೆ ಮದುವೆ ಮಾಡಿಸಿದ್ದರು. ಜೈಲಿಂದ ಬಂದ ನಂತರ ಮುಬೀನ್ ತಸ್ಲಿಮಾ ಜೊತೆ ಸಂಪರ್ಕದಲ್ಲಿದ್ದನು. ಅಷ್ಟೇ ಅಲ್ಲದೇ ದುಡಿಯಲು ಎಂದು ದುಬೈಗೆ ಹೋಗಿದ್ದನು.

ಮುಬೀನ್ ದುಬೈನಲ್ಲಿ ದುಡಿದು ತಸ್ಲಿಮಾ ಬಾನುಗೆ ಒಡವೆ, ನೆಕ್ಲೆಸ್, ಮೊಬೈಲ್, ಬಟ್ಟೆ ಎಲ್ಲವನ್ನೂ ಕೊಡಿಸುತ್ತಿದ್ದ. ಡಿಸೆಂಬರ್ 26ರಂದು ತಸ್ಲಿಮಾಳನ್ನು ನೋಡಲು ಮುಬೀನ್ ಬೆಂಗಳೂರಿಗೆ ಬಂದಿದ್ದ. ಆಗ ತಸ್ಲಿಮಾ ನೀನು ನನಗೆ ಬೇಡ ಎಂದು ಹೇಳಿದ್ದಾಳೆ. ತಸ್ಲಿಮಾ ಈ ರೀತಿ ಹೇಳಿದ್ದಕ್ಕೆ ಸಿಟ್ಟಾಗಿ ಮುಬೀನ್ ಅಡುಗೆ ಮನೆಯಿಂದ ಚಾಕು ತಂದು 20 ಕಡೆ ಇರಿದು ಕೊಲೆ ಮಾಡಿದ್ದಾನೆ.

ಕೊಲೆ ನಂತರ ತಾನು ಕೊಡಿಸಿದ್ದ ಒಡವೆ, ನೆಕ್ಲೆಸ್, ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದ. ಈಗ ಆರೋಪಿ ಮುಬೀನ್‍ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮುಬೀನ್ ತನ್ನ ಕೈ ಮೇಲೆ ಚಾಕುವಿನಿಂದ ತಸ್ಲೀಮಾ ಎಂದು ಬರೆದುಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *