ಹಣ ನೀಡದ್ದಕ್ಕೆ ಶಾಲೆಯಲ್ಲೇ ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ

Public TV
1 Min Read

ರಾಮನಗರ: ಹಣ ನೀಡಲಿಲ್ಲ ಎಂದು ಕರ್ತವ್ಯ ನಿರತ ಶಾಲಾ ಶಿಕ್ಷಕಿ ಮೇಲೆ ಶಾಲೆಯಲ್ಲಿಯೇ ಪತಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಾಗಡಿ ತಾಲೂಕಿನ ಸಂಜೀವಯ್ಯನ ಪಾಳ್ಯದ ಶಂಭಯ್ಯನಪಾಳ್ಯದಲ್ಲಿ ನಡೆದಿದೆ.

ಶಂಭಯ್ಯನಪಾಳ್ಯದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುನಂದ ಮೇಲೆ ಕುಣಿಗಲ್ ಮೂಲದ ರೇಣುಕಾನಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ರೇಣುಕಾನಂದ ಶಿಕ್ಷಕಿ ಸುನಂದ ಅವರ ಎರಡನೇ ಪತಿಯಾಗಿದ್ದು, 2 ಲಕ್ಷ ರೂ. ಹಣ ಹಾಗೂ ಅವರ ಬಳಿ ಇರುವ ಒಡವೆ ನೀಡುವಂತೆ ಒತ್ತಾಯಿಸಿದ್ದ. ಆದರೆ ಹಣವಿಲ್ಲವೆಂದು ತಿಳಿಸಿದ್ದ ಸುನಂದ ಅವರು ಮಗನನ್ನು ಇತ್ತೀಚೆಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಶಿಕ್ಷಣಕ್ಕೆ ದಾಖಲಿಸಿದ್ದರು.

ಮಗನನ್ನು ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ್ದಕ್ಕೆ ಆಕ್ರೋಶಗೊಂಡಿದ್ದ ರೇಣುಕಾನಂದ ಇಂದು ಪೆಟ್ರೋಲ್ ತೆಗೆದುಕೊಂಡು ಶಾಲೆ ಬಳಿ ಬಂದು ಶಿಕ್ಷಕಿ ಸುನಂದ ಅವರ ಜೊತೆ ಜಗಳವಾಡಿದ್ದಾನೆ. ಅಲ್ಲದೇ ಶಾಲೆಯಲ್ಲಿಯೇ ಸುನಂದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.

ಘಟನೆ ವೇಳೆ ಸ್ಥಳದಲ್ಲಿದ್ದ ಸಹ ಶಿಕ್ಷಕರು ಬೆಂಕಿ ನಂದಿಸಿ ಮಾಗಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಶೇ.40 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿರುವ ಶಿಕ್ಷಕಿ ಸುನಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *