ಪ್ರಾಣವನ್ನೇ ಪಣಕ್ಕಿಟ್ಟು ವ್ಯಕ್ತಿಯಿಂದ ಬಾವಿಯೊಳಗೆ ಬಿದ್ದ ಬೆಕ್ಕಿನ ರಕ್ಷಣೆ

Public TV
1 Min Read

ಧಾರವಾಡ: ಬಾವಿಯೊಳಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಸಾಹಸಕ್ಕೆ ಮುಂದಾದ ವ್ಯಕ್ತಿಯೊಬ್ಬ ಆ ಬಳಿಕ ಬಾವಿಯಿಂದ ಮೇಲೆ ಬರಲು ಪೇಚಾಡಿ, ಪರದಾಡಿ, ಪ್ರಾಣವನ್ನೇ ಪಣಕ್ಕಿಟ್ಟು ಹರಸಾಹಸ ಪಟ್ಟಿರುವ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.

ಇಲ್ಲಿನ ಬಾವಿಯೊಂದರಲ್ಲಿ ಬೆಕ್ಕೊಂದು ಆಕಸ್ಮಿಕವಾಗಿ ಬಿದ್ದು ಚಿರಾಟ ನಡೆಸಿತ್ತು. 16 ಅಡಿ ಆಳದ ಬಾವಿ ಬಳಿಯಿಂದಲೇ ಹೋಗುತ್ತಿದ್ದ ದೇವರಾಜ್ ಹಾಗೂ ಸ್ನೇಹಿತರು ಬೆಕ್ಕಿನ ಧ್ವನಿ ಕೇಳಿ ಬಾವಿಯೊಳಗೆ ಬೆಕ್ಕು ಅಪಾಯದಲ್ಲಿರುವುದನ್ನು ನೋಡಿದ್ದಾರೆ. ಈ ಸಂದರ್ಭದಲ್ಲಿ ದೇವರಾಜ್ ಎಂಬವರನ್ನು ಏಣಿಗೆ ಹಗ್ಗ ಕಟ್ಟಿ ಕೆಳಗೆ ಇಳಿಸಲಾಗಿದೆ.

ಬಾವಿಯ ಆಳಕ್ಕೆ ಇಳಿದ ದೇವರಾಜ್ ಕೊನೆಗೂ ಬೆಕ್ಕನ್ನು ಸುರಕ್ಷಿತವಾಗಿ ಬಾವಿಯಿಂದ ರಕ್ಷಿಸಿದ್ದರು. ಆದರೆ ಬೆಕ್ಕಿನ ರಕ್ಷಣೆ ಬಳಿಕ ಬಾವಿಯಿಂದ ಮೇಲೆ ಬರಬೇಕಾದರೆ ಸಾಹಸ ಮಾಡಿದ ದೇವರಾಜ್ ಪ್ರಾಣವನ್ನೇ ಪಣಕ್ಕಿಡಬೇಕಾಯ್ತು. ಬಾವಿಯ ಮೇಲ್ಗಡೆ ದೇವರಾಜರನ್ನು ಮೇಲಕ್ಕೆತ್ತಲು ಇದ್ದಿದ್ದು ಮೂವರು ಮಾತ್ರ. ಈ ಸಂದರ್ಭದಲ್ಲಿ ಮೇಲೆ ಬರಬೇಕಾದರೆ ಎರಡು ಸಲ ಅವರ ಕಾಲು ಜಾರಿತ್ತು.

ಈ ಸಂದರ್ಭದಲ್ಲಿ ಮತ್ತೊಂದು ಹಗ್ಗದ ಸಹಾಯದಿಂದ ಜೋತು ಬಿದ್ದು ತಮ್ಮ ಪ್ರಾಣ ಉಳಿಸಿಕೊಂಡ ದೇವರಾಜ್ ಕೊನೆಗೂ ಹರಸಾಹಸ ಪಟ್ಟು ಮೇಲಕ್ಕೆ ಬಂದಿದ್ದಾರೆ. ಸದ್ಯ 11 ನಿಮಿಷದ ಈ ಕಾರ್ಯಾಚರಣೆಯ ವಿಡಿಯೋ ಒಂದೇ ದಿನದಲ್ಲಿ ಧಾರವಾಡ ತುಂಬಾ ವೈರಲ್ ಆಗಿದ್ದು, ಬಾವಿಗಿಳಿದು ಬೆಕ್ಕನ್ನು ರಕ್ಷಿಸಿದ ದೇವರಾಜ್ ಮತ್ತು ಸ್ನೇಹಿತರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *