40 ಅಡಿಗೂ ಹೆಚ್ಚು ಆಳದ ಪಾಳುಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ

Public TV
1 Min Read

ನೆಲಮಂಗಲ: ನೀರಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ವ್ಯಕ್ತಿನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುನಲ್ಲಿ ಘಟನೆ ನಡೆದಿದ್ದು, ಗ್ರಾಮದ ಹೊಸ ಕಾಲೋನಿಯ ಕುಮಾರ್ ಬಾವಿಗೆ ಬಿದ್ದ ವ್ಯಕ್ತಿ. ಪೊಲೀಸ್ ಠಾಣೆಯ ಬಳಿಯಿರುವ ಶ್ರೀ ಚಂದ್ರಮೌಳೇಶ್ವರ ಸ್ವಾಮಿಯ ಪುರಾತನ ದೇವಾಲಯದ ಬಾವಿ ಇದಾಗಿದೆ. ಇದು ಸುಮಾರು 40 ಅಡಿಗೂ ಹೆಚ್ಚು ಆಳವಿದ್ದು, ನೀರಿಲ್ಲದೆ ಪಾಳು ಬಿದ್ದಿದೆ.

ವ್ಯಕ್ತಿ ಭಾನುವಾರ ಮಧ್ಯಾಹ್ನ ಬಾವಿಗೆ ಬಿದ್ದಿದ್ದು, ತ್ಯಾಮಗೊಂಡ್ಲು ಗ್ರಾಮದ ಹೊಸ ಕಾಲೋನಿಯ ಕುಮಾರ್ ಅವರನ್ನು ಏಣಿ ಸಹಾಯದಿಂದ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಾವಿಯ ಕಟ್ಟೆಯ ಮೇಲೆ ಕೂರಲು ಹೋದಾಗ ಜಾರಿ ಬಾವಿಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಆಳದ ಬಾವಿಗೆ ಬಿದ್ದ ಕಾರಣ ರಭಸಕ್ಕೆ ಕುಮಾರ್ ಅವರ ತೋಡೆಯ ಭಾಗಕ್ಕೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಪಟ್ಟಣದ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಬಾವಿಗೆ ಕಬ್ಬಿಣದ ಮೆಷ್ ನಿರ್ಮಾಣ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *