ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ – ತಡೆಯಲು ಹೋದ ತಾಯಿಯ ಕೊಂದೇ ಬಿಟ್ಟ!

Public TV
1 Min Read

ಭುವನೇಶ್ವರ: ವ್ಯಕ್ತಿಯೊಬ್ಬ ಅಪ್ರಾಪ್ತ ಮಗಳ ಮೇಲೆ ನಡೆಯುತ್ತಿದ್ದ ಅತ್ಯಾಚಾರ ತಪ್ಪಿಸಲು ಬಂದಿದ್ದ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಒಡಿಶಾದ ಭದ್ರಾಕ್ ಜಿಲ್ಲೆಯಲ್ಲಿ ನಡೆದಿದೆ.

ಭಾನುವಾರ ತಾಲಾಸೀತ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ಆರೋಪಿಯ ವಿರುದ್ಧ ದೂರು ನೀಡಿದ್ದಾಳೆ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

ಘಟನೆ ವಿವರ:
ಭಾನುವಾರ ರಾತ್ರಿ ತಾಯಿ ಮತ್ತು ಮಗಳು ಇಬ್ಬರು ಮನೆಯಲ್ಲಿದ್ದರು. ಆಗ ಅದೇ ಗ್ರಾಮದ ನಿವಾಸಿ ಏಕಾಏಕಿ ಮನೆಗೆ ನುಗ್ಗಿದ್ದಾನೆ. ಬಳಿಕ ಅಪ್ರಾಪ್ತೆಯನ್ನು ಮನೆಯ ಕಂಬಕ್ಕೆ ಕಟ್ಟಿ ಹಾಕಿದ್ದಾನೆ. ನಂತ್ರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಈ ವೇಳೆ ತಾಯಿ ಮಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಆರೋಪಿ ರುಬ್ಬುವ ಕಲ್ಲು ತೆಗೆದುಕೊಂಡು ತಾಯಿಯ ತಲೆಗೆ ಹೊಡೆದಿದ್ದಾನೆ. ತದನಂತರ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾನೆ ಎಂದು ಧಮ್ ನಗರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಂಧನಾ ಪತ್ರಾ ಹೇಳಿದ್ದಾರೆ.

ಸೋಮವಾರ ಮುಂಜಾನೆ ಗ್ರಾಮಸ್ಥರು ನೋಡಿ ಇಬ್ಬರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ತಾಯಿ ಮೃತಪಟ್ಟಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ನಿಯಂತ್ರಿಸಲು ಮುಂದಾಗಿದ್ದಾರೆ. ಆದರೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಕೊನೆಗೆ ಡಿಐಜಿ ಅಮಿತೇಂದ್ರನಾಥ್ ಸಿನ್ಹಾ ಮತ್ತು ಭಾದ್ರಕ್ ಪೊಲೀಸ್ ಅಧೀಕ್ಷಕ ಪಿ.ಬಿ ಗಂಗಾಧರ್ ಗ್ರಾಮಕ್ಕೆ ಪರಿಸ್ಥಿಯನ್ನು ನಿಯಂತ್ರಿಸಿ, ಘಟನೆ ನಡೆದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ಸಂತ್ರಸ್ತೆ, ತನ್ನ ತಾಯಿಯನ್ನು ಕೊಂದು ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಹೇಳಿಕೆಯನ್ನು ನೀಡಿದ್ದಾಳೆ. ಸದ್ಯಕ್ಕೆ ಸಂತ್ರಸ್ತೆ ನೀಡಿರುವ ದೂರನ್ನು ದಾಖಲಿಸಿಕೊಂಡಿದ್ದು, ತನಿಖೆ ಪ್ರಾರಂಭಿಸಲಾಗಿದೆ. ಆರೋಪಿಯನ್ನು ಶೀಘ್ರವಾಗಿ ಬಂಧಿಸಲು ಪ್ರಯತ್ನಗಳು ನಡೆಯುತ್ತಿದೆ ಎಂದು ಪಿ.ಬಿ ಗಂಗಾಧರ್ ಅವರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *