ತಾಯಿ ಮೇಲಿನ ಸೇಡಿಗೆ ಮಗನನ್ನ ಕತ್ತು ಸೀಳಿ ಕೊಂದ ಕಿರಾತಕ

Public TV
1 Min Read

ಬೆಂಗಳೂರು: ಪರಸ್ತ್ರೀಯೊಂದಿಗಿನ ಸಂಬಂಧದ ಬಗ್ಗೆ ದೂರು ಹೇಳಿದ ಕೋಪಕ್ಕೆ ವ್ಯಕ್ತಿಯೊಬ್ಬ ನೆರೆಮನೆಯಲ್ಲಿ ವಾಸವಿದ್ದ ಮಹಿಳೆಯ ಮಗನನ್ನ ಕತ್ತು ಕೊಯ್ದು ಕೊಲೆ ಮಾಡಿದ್ದು, ಇದೀಗ ನ್ಯಾಯಾಲಯ ಆತನನ್ನು ದೋಷಿ ಎಂದು ಪ್ರಕಟಿಸಿದೆ.

ಏನಿದು ಪ್ರಕರಣ?: 2015ರ ಫೆಬ್ರವರಿ 4ರಂದು ಶಾಲೆಗೆ ಹೋಗಿದ್ದ 8ನೇ ತರಗತಿ ಕಿರಣ್ ಎಂಬ ಬಾಲಕ ಸಂಜೆಯಾದರೂ ಮನೆಗೆ ಬರಲಿಲ್ಲ. ಮಗ ಮನೆಗೆ ಬರದೇ ಇದ್ದಿದ್ದರಿಂದ ಗಾಬರಿಗೊಂಡ ಪೋಷಕರು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದರು. ಮುದ್ದು ಮುದ್ದಾಗಿದ್ದ ಬಾಲಕ ಕಿರಣ್ ಯಾದವ್‍ನನ್ನ ಹುಡುಕ್ತಿದ್ದ ಪೊಲೀಸರಿಗೆ ಅದೊಂದು ಸಿಸಿಟಿವಿ ಕ್ಲೂ ಕೊಟ್ಟಿತ್ತು. ಬಾಲಕನ ಎದರು ಮನೆಯಲ್ಲೇ ಇದ್ದ ಮಂಜುನಾಥ್ ಜೊತೆ ಕಿರಣ್ ಬೈಕಿನಲ್ಲಿ ಹೋಗೋದು ಪತ್ತೆಯಾಗಿತ್ತು.

ಮಂಜುನಾಥನ ವಿಚಾರಣೆ ನಡೆಸಿದಾಗ ಮೊದಲು ನನಗೆ ಏನೂ ಗೊತ್ತಿಲ್ಲ ಅಂತಾ ಹೇಳಿದ್ದ. ಆದರೆ ಪೊಲೀಸರು ತಮ್ಮದೇ ಸ್ಟೈಲಲ್ಲಿ ಬೆಂಡೆತ್ತಿದಾಗ ಎಲ್ಲಾ ಬಾಯಿ ಬಿಟ್ಟಿದ್ದ. ನಿನ್ನ ತಮ್ಮನಿಗೆ ಆಕ್ಸಿಡೆಂಟ್ ಆಗಿದೆ. ನಿಮ್ಮವರೆಲ್ಲಾ ಆಸ್ಪತ್ರೆಯಲ್ಲಿದ್ದಾರೆ ಬಾ ಅಂತಾ ಕಿರಣ್‍ನನ್ನ ಬೈಕ್‍ನಲ್ಲಿ ಮಂಜುನಾಥ್ ಕರೆದುಕೊಂಡು ಹೋಗಿದ್ದ. ನಂತರ ಕಿರಣ್ ನನ್ನು ಜ್ಞಾನಭಾರತಿ ಬಳಿ ಕತ್ತು ಕೊಯ್ದು ಕೊಲೆ ಮಾಡಿದ್ದ. ಮಂಜುನಾಥ ಸತ್ಯ ಬಾಯ್ಬಿಡುವ ವೇಳೆಗಾಗಲೇ ಒಂದು ವಾರ ಕಳೆದಿತ್ತು. ಕೂಡಲೇ ಚಂದ್ರಾಲೇಔಟ್ ಪೊಲೀಸರು ಘಟನಾ ಸ್ಥಳಕ್ಕೆ ಹೋದಾಗ ಕಿರಣ್ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಕೂಲ್ ಬ್ಯಾಗ್, ಐಡಿ ಕಾರ್ಡ್ ಅಲ್ಲೇ ಬಿದ್ದಿತ್ತು. ಬ್ಲೇಡ್ ಕೂಡ ಸ್ಥಳದಲ್ಲೇ ಸಿಕ್ಕಿತ್ತು.

ತಾಯಿಯ ಮೇಲೆ ಕೋಪ: ಮಂಜುನಾಥ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಈ ಹಿನ್ನೆಲೆಯಲ್ಲಿ ನಿಮ್ಮ ಮಗನಿಗೆ ಬುದ್ಧಿ ಹೇಳಿ ಅಂತಾ ಕಿರಣ್ ತಾಯಿ ಪ್ರಮೀಳಾ ಮಂಜುನಾಥನ ಮನೆಯವರಿಗೆ ಹೇಳಿದ್ದರು. ಇದೇ ಕಾರಣಕ್ಕಾಗಿ ಪ್ರಮೀಳಾರಿಗೆ ಬುದ್ಧಿ ಕಲಿಸಲು ಕಿರಣ್‍ನನ್ನು ಮಂಜುನಾಥ ಕೊಲೆ ಮಾಡಿದ್ದಾನೆ.

ಚಂದ್ರಾಲೇಔಟ್‍ನ ಅಂದಿನ ಇನ್ಸ್ ಪೆಕ್ಟರ್ ಸುದರ್ಶನ್ ಬಲವಾಗೇ ಚಾರ್ಜ್ ಶೀಟ್ ಹಾಕಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಎಂಎನ್ ವಾರದ್ ವಾದ ಮಂಡಿಸಿದ್ರು. ಸಿಸಿಎಚ್ 51ರ ಜಡ್ಜ್ ಸುಶೀಲಾ, ಮಂಜುನಾಥ ದೋಷಿ ಅಂತಾ ಘೋಷಿಸಿದ್ದು, ಇದೇ 21ರಂದು ಶಿಕ್ಷೆ ಪ್ರಕಟವಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *