ಚಿಕ್ಕಬಳ್ಳಾಪುರ: ಆಸ್ತಿ ವಿಚಾರದಲ್ಲಿ ಉಂಟಾದ ಜಗಳದಲ್ಲಿ ಪತಿಯೊರ್ವ ತನ್ನ ಪತ್ನಿಯನ್ನ ನೇಗಿಲಿನಿಂದ ಹೊಡೆದು ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭಾರತಮ್ಮ(28) ಮೃತ ದುರ್ದೈವಿ ಪತ್ನಿ. ಇವರನ್ನು ಪತಿ 35 ವರ್ಷದ ಗಂಗಾಧರ್ ಕೊಲೆ ಮಾಡಿದ್ದಾನೆ. ಗಂಗಾಧರ್ ಗೆ ಎರಡು ಮದುವೆ ಆಗಿದ್ದು ಮೊದಲ ಪತ್ನಿ ತೀರಿಕೊಂಡ ನಂತರ ಎರಡನೇ ವಿವಾಹವಾಗಿದ್ದನು. ಮೊದಲು ಪತ್ನಿಗೆ ಒರ್ವ ಮಗಳಿದ್ದು, ಎರಡನೇ ಪತ್ನಿ ಮೃತ ಭಾರತಮ್ಮಳಿಗೆ 8 ವರ್ಷದ ಗಂಡು ಮಗನಿದ್ದಾನೆ.
ಆಸ್ತಿಯಲ್ಲಿ ಮೊದಲ ಹೆಂಡತಿ ಮಗಳಿಗೂ ಪಾಲು ಕೊಡುವ ವಿಚಾರದಲ್ಲಿ ಇಬ್ಬರ ನಡುವೆ ಪದೇ ಪದೇ ಜಗಳಗಳಾಗುತ್ತಿದ್ದು, ಇಂದು ಸಹ ಅದೇ ವಿಚಾರವಾಗಿ ಜಗಳ ಆಗಿದೆ. ನನ್ನ ಮಗನಿಗೆ ಸಂಪೂರ್ಣ ಆಸ್ತಿ ಸೇರಬೇಕು ಅಂತ ಭಾರತಮ್ಮ ಪಟ್ಟು ಹಿಡಿದಿದ್ದಳಂತೆ. ಇದ್ರಿಂದ ಸಿಟ್ಟುಗೊಂಡ ಗಂಡ ಮನೆಯಲ್ಲಿಯೇ ಇದ್ದ ನೇಗಿಲಿನಿಂದ ತಲೆಗೆ ಹೊಡೆದಿದ್ದಾನೆ. ಇದ್ರಿಂದ ಭಾರತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಚಿಕ್ಕಬಳ್ಳಾಪುರ ಎಸ್ಪಿ ಕಾರ್ತಿಕ್ ರೆಡ್ಡಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಆರೋಪಿ ಗಂಡ ಗಂಗಾಧರ್ ನನ್ನ ವಶಕ್ಕೆ ಪಡೆದಿರುವ ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv