ಮದ್ವೆಯಾದ 6 ತಿಂಗ್ಳಿಗೇ ಪತ್ನಿಯ ಕೊಲೆಗೈದು ಮಕ್ಕಳ ಕಳ್ಳರು ಕೊಲೆ ಮಾಡಿದ್ರು ಎಂದಿದ್ದ- ಈಗ ಕಂಬಿ ಹಿಂದೆ ಪತಿ

Public TV
1 Min Read

ಬಳ್ಳಾರಿ: ರಾಜ್ಯದೆಲ್ಲೆಡೆ ಇದೀಗ ಮಕ್ಕಳ ಕಳ್ಳರದ್ದೆ ಸುದ್ದಿ. ಮಕ್ಕಳನ್ನ ಕೊಲೆ ಮಾಡುತ್ತಾರೆ ಅನ್ನೋ ವದಂತಿ ಹಬ್ಬಿದ ಬೆನ್ನಲ್ಲೇ. ಪತ್ನಿಯನ್ನು ಕೊಲೆ ಮಾಡಿದ ಪತಿಯೊಬ್ಬ ಕೊಲೆ ಆರೋಪವನ್ನ ಮಕ್ಕಳ ಕಳ್ಳರ ಮೇಲೆ ಹೊರೆಸಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ.

ಸುನೀತಾ ಪತಿಯಿಂದ ಕೊಲೆಯಾದ ದುರ್ದೈವಿ. ಅಂಗವಿಕಲೆಯಾಗಿದ್ದ ಸುನೀತಾಳನ್ನು ಮಕ್ಕಳ ಕಳ್ಳರು ಕೊಲೆ ಮಾಡಿದ್ದಾರೆ ಅಂತಾ ಸುನೀತಾಳ ಪತಿ ಪೊಲೀಸ್ ಠಾಣೆಯ ಮೇಟ್ಟಿಲೇರಿದ್ದನು. ಪೊಲೀಸರು ತನಿಖೆಗೆ ಮುಂದಾದ ವೇಳೆ ಪಾಪಿ ಪತಿಯ ಹೀನ ಕೃತ್ಯ ಬೆಳಕಿಗೆ ಬಂದಿದೆ.

ಘಟನೆ ವಿವರ:
ಅಂಗವಿಕಲೆಯಾಗಿದ್ದ ಸುನೀತಾಳನ್ನು ಆರು ತಿಂಗಳ ಹಿಂದೆ ಬಳ್ಳಾರಿ ತಾಲೂಕಿನ ಶಿಡಗಿನಮೊಳ ಗ್ರಾಮದ ರಾಮಚಂದ್ರನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ವೇಳೆ ವರದಕ್ಷಿಣೆ ನೀಡಿದರೂ ಸುನೀತಾಳ ಮನೆಯವರು ಮದುವೆ ವೇಳೆ ಕೊಟ್ಟಿದ್ದ ಮಾತಿನಂತೆ ಬೈಕ್ ಕೊಡಿಸಿರಲಿಲ್ಲ. ಹೀಗಾಗಿ ನಿತ್ಯ ಕುಡಿದು ಬಂದು ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದನು. ಬಳಿಕ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ತಾನೇ ಪಿಡಿ ಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಪತ್ನಿಯನ್ನು ಮಕ್ಕಳ ಕಳ್ಳರು ಕೊಲೆ ಮಾಡಿ ಹೋಗಿದ್ದಾರೆ ಅಂತಾ ದೂರು ನೀಡಿದ್ದನು.

ದೂರು ಸ್ವೀಕರಿಸಿದ ಪೊಲೀಸರಿಗೆ ಪತಿಯ ವಿರುದ್ಧವೇ ಸಂಶಯ ವ್ಯಕ್ತವಾಗಿದೆ. ಹೀಗಾಗಿ ಆತನನ್ನು ತನಿಖೆ ನಡೆಸಿದಾಗ ಸುನೀತಾಳನ್ನು ವರದಕ್ಷಿಣೆಗಾಗಿ ಪತಿ ರಾಮಚಂದ್ರನೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ವರದಕ್ಷಿಣೆಗಾಗಿ ಕೊಲೆ ಮಾಡಿದ ರಾಮಚಂದ್ರನಿಗೆ ತಕ್ಕ ಶಿಕ್ಷೆಯಾಗಬೇಕು ಅಂತ ಪೋಷಕರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *