ಪತ್ನಿ ನೋಡಲು ಹೋಗ್ತಿದ್ದವನಿಗೆ ಬೆಂಕಿ ಹಚ್ಚಿದ ಗ್ರಾಮಸ್ಥರು

Public TV
1 Min Read

ಲಕ್ನೋ: ಗ್ರಾಮಸ್ಥರು ಅಮಾಯಕ ವ್ಯಕ್ತಿಯನ್ನು ಕಳ್ಳನೆಂದು ಅನುಮಾನಗೊಂಡು ಆತನಿಗೆ ಥಳಿಸಿ ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

ಬಾರಾಬಂಕಿ ಬಳಿಯ ರಾಘೋಪುರ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಸುಜಿತ್ ಕುಮಾರ್‍ನನ್ನು ತೀವ್ರಗಾಯಗೊಂಡಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.

ನಡೆದಿದ್ದೇನು?
ತಿಂದೋಲಾ ಗ್ರಾಮದ ನಿವಾಸಿ ಸುಜಿತ್ ಕುಮಾರ್ ಶುಕ್ರವಾರ ಪತ್ನಿಯನ್ನು ನೋಡಲೆಂದು ತನ್ನ ಅತ್ತೆ ಮನೆಗೆ ತೆರಳುತ್ತಿದ್ದನು. ಈ ವೇಳೆ ರಾತ್ರಿ ನಾಯಿಗಳು ಸುಜಿತ್ ಕುಮಾರ್‌ನನ್ನು ಓಡಿಸಿಕೊಂಡು ಬಂದಿವೆ. ಇದರಿಂದ ಭಯಗೊಂಡ ಸುಜೀತ್ ನಾಯಿಗಳಿಂದ ತಪ್ಪಿಸಿಕೊಳ್ಳಲು ಅಲ್ಲೆ ಸಮೀಪವಿದ್ದ ಮನೆಗೆ ಓಡಿ ಹೋಗಿ ಅವಿತುಕೊಂಡಿದ್ದಾನೆ. ಈ ವೇಳೆ ಮನೆಯವರು ಈತನನ್ನು ಕಂಡು ಕಳ್ಳ ಕಳ್ಳ ಎಂದು ಕೂಗಿದ್ದಾರೆ. ತಕ್ಷಣ ನೆರೆಹೊರೆಯವರು ಸೇರಿಕೊಂಡು ಸುಜಿತ್ ಕುಮಾರ್‌ನನ್ನು ಹಿಡಿದು ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಎಸ್‍ಪಿ ಆಕಾಶ್ ಟೊಮಾರ್ ತಿಳಿಸಿದ್ದಾರೆ

ಸುಮಾರು ಐದಾರು ಜನರು ನನ್ನ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಮ್ಮ ತಂದೆ ಘಟನೆ ನಡೆದ ಸ್ಥಳಕ್ಕೆ ಹೋದಾಗ ಗ್ರಾಮಸ್ಥರು ಹಲ್ಲೆ ಮಾಡುತ್ತಿರುವುದನ್ನು ನಿಲ್ಲಿಸಿ. ಪತಿಯನ್ನು ಕಾಪಾಡಿ ತಕ್ಷಣ ಲಕ್ನೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸುಜಿತ್ ಪತ್ನಿ ಹೇಳಿದ್ದಾರೆ.

ಈ ಕುರಿತು ಸುಜಿತ್ ಕುಮಾರ್ ಪತ್ನಿ ಪೂನಂ ಗ್ರಾಮಸ್ಥರ ವಿರುದ್ಧ ದೂರು ನೀಡಿದ್ದರು. ಮಹಿಳೆ ನೀಡಿದ ದೂರಿನ ಅನ್ವಯ ನಾವು ಎಫ್‍ಐಆರ್ ದಾಖಲಿಸಿಕೊಂಡಿದ್ದು, ಈ ಪ್ರಕರಣ ಸಂಬಂಧ ಉಮೇಶ್ ಯಾದವ್ ಮತ್ತು ಶ್ರವಣ್ ಯಾದವ್ ಇಬ್ಬರನ್ನು ಬಂಧಿಸಿದ್ದೇವೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇನೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *