ಜನರ ಎದುರೇ ಚಿಕ್ಕಪ್ಪನನ್ನು ಕೊಚ್ಚಿ ಕೊಂದ ಅಣ್ಣನ ಮಗ!

Public TV
1 Min Read

ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬ ಜನರ ಎದುರೇ ತನ್ನ ಚಿಕ್ಕಪ್ಪನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗೌರಿಬಿದನೂರಿನ (Gauribidanur) ಚೋಳಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹತ್ಯೆಯಾದ ವ್ಯಕ್ತಿಯನ್ನು ಕೊತ್ತೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗಂಗರತ್ನಮ್ಮ ಅವರ ಪತಿ ರಾಮಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಈತನನ್ನ ಬರ್ಬರವಾಗಿ ಕೊಲೆ ಮಾಡಿರುವುದು ಸ್ವತಃ ರಾಮಕೃಷ್ಣಪ್ಪನ ಅಣ್ಣನ ಮಗ ನಾಗರಾಜ್ ಎಂದು ತಿಳಿದು ಬಂದಿದೆ. ಬೆಳಿಗ್ಗೆ ಹಾಲು ತರಲು ಡೈರಿ ಬಳಿ ತೆರಳಿದ್ದ ವೇಳೆ ಆರೋಪಿ, ರಾಮಕೃಷ್ಣಪ್ಪನ ಮೇಲೆ ಏಕಾಏಕಿ ಮನಸ್ಸೋ ಇಚ್ಛೇ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವದಿಂದ ಆತ ಸಾವಿಗೀಡಾಗಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇದನ್ನೂ ಓದಿ: ಜೂಜಾಟಕ್ಕೆ ಹಣ ಕೊಡದ ಪತ್ನಿಯ ತಲೆ ಒಡೆದು ಹತ್ಯೆ – ಆರೋಪಿ ಅರೆಸ್ಟ್

ರಾಮಕೃಷ್ಣಪ್ಪ ಊರಲ್ಲಿ ನ್ಯಾಯ ಪಂಚಾಯತಿ ಮಾಡೋದು, ಸಮಾಜಸೇವೆ ಕೆಲಸ ಮಾಡಿಕೊಂಡು ಒಳ್ಳೆಯವನು ಎನಿಸಿಕೊಂಡಿದ್ದ. ಈತನ ಅಣ್ಣನ ಮಗ ನಾಗರಾಜ್ ಪಂಚಾಯತಿ ಕೊಳವೆ ಬಾವಿಯ ಕೇಬಲ್ ಕದ್ದು ಸಿಕ್ಕಿಬಿದ್ದಿದ್ದು ಪ್ರಕರಣದಲ್ಲಿ ಜೈಲುಪಾಲಾಗಿದ್ದ ಎನ್ನಲಾಗಿದೆ. ಇನ್ನೂ ಜೈಲಿಂದ ಬಂದವನು ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನೆಲ್ಲಾ ತಿಳಿದಿದ್ದ ರಾಮಕೃಷ್ಣಪ್ಪ ಪೊಲೀಸರಿಗೆ (Police) ಹಾಗೂ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದನಂತೆ. ಬೇಟೆಯಾಡಲು ನಾಗರಾಜ್ ಸಾಕಿಕೊಂಡಿದ್ದ ಬೇಟೆ ನಾಯಿಗಳು ಸಹ ಇತ್ತೀಚೆಗೆ ಸಾವನ್ನಪ್ಪಿದ್ದು, ಅದಕ್ಕೆ ರಾಮಕೃಷ್ಣಪ್ಪನೇ ಕಾರಣ ಎನ್ನುವ ಅನುಮಾನ ಸಹ ಇತ್ತು ಎನ್ನಲಾಗಿದೆ. ಇಷ್ಟೇ ಅಲ್ಲದೆ ಅನೈತಿಕ ಸಂಬಂಧದ ಶಂಕೆ ಸಹ ವ್ಯಕ್ತವಾಗಿದ್ದು ಇದೆಲ್ಲ ಕೊಲೆಗೆ ಕಾರಣ ಆಗಿರಬಹುದು ಎನ್ನಲಾಗಿದೆ.

ಕೊಲೆಯ ಬಳಿಕ ಆರೋಪಿ ಊರು ತೊರೆದು ಕಾಡು ಸೇರಿದ್ದಾನೆ ಎನ್ನಲಾಗಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‍ಪಿ ನಾಗೇಶ್ ನೇತೃತ್ವದಲ್ಲಿ ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ಅಪರಿಚಿತೆಯ ಮಾತುಕೇಳಿ ವೀಡಿಯೋ ಕಾಲ್‍ನಲ್ಲಿ ನಗ್ನವಾಗಿ ಲಕ್ಷಾಂತರ ರೂ. ಕಳೆದುಕೊಂಡ!

Share This Article