ವಿಜಯಪುರ: ಕುಡಿದ ಮುತ್ತಿನಲ್ಲಿ ಪತಿ ಕಟ್ಟಿಗೆಯಿಂದ ಪತ್ನಿಯ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬಂಕಲಗಿ ಗ್ರಾಮದಲ್ಲಿ ನಡೆದಿದೆ.
ಸಿದ್ದಮ್ಮ ಸಂಗಠಾಣ (24) ಪತಿಯಿಂದಲೇ ಹತ್ಯೆಯಾದ ದುರ್ದೈವಿ. ಆರೋಪಿ ಪತಿ ಬಸವರಾಜ್ ಸಂಗಠಾಣ ಈ ಕೃತ್ಯ ಎಸಗಿದ್ದಾನೆ. ಕೊಲೆಗೈದ ನಂತರ ಪತ್ನಿ ಮೈಮೇಲಿದ್ದ ಆಭರಣಗಳ ಸಮೇತ ಪಾಪಿ ಪತಿ ಬಸವರಾಜ್ ಪರಾರಿಯಾಗಿದ್ದಾನೆ.
ಬಸವರಾಜ್ ಮತ್ತು ಸಿದ್ದಮ್ಮ ಸಂಗಾಠಾಣ ಮದುವೆಯಾಗಿ ಮೂರು ವರ್ಷಗಳಾಗಿತ್ತು. ಆರೋಪಿ ಬಸವರಾಜ್ ಕುಡಿತಕ್ಕೆ ದಾಸನಾಗಿದ್ದ. ಭಾನುವಾರ ರಾತ್ರಿ ಕುಡಿದು ಮನೆಗೆ ಬಂದಿದ್ದಾನೆ. ಕುಡಿದ ಮತ್ತಿನಲ್ಲಿ ಏಕಾಏಕಿ ಅಲ್ಲೇ ಪಕ್ಕದಲ್ಲಿದ್ದ ಕಟ್ಟಿಗೆಯನ್ನು ತೆಗೆದುಕೊಂಡು ಸಿದ್ದಮ್ಮನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಭಯಗೊಂಡು ಪತ್ನಿಯ ಮೈಮೇಲಿದ್ದ ಆಭರಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಇನ್ನು ಮನೆಯಿಂದ ಹೊರ ಬಂದಿಲ್ಲ ಎಂದು ಮುಂಜಾನೆ ಸಂಬಂಧಿಕರು ಹೋಗಿ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಸಂಬಂಧಿಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಸಿಂದಗಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ಪತಿಗಾಗಿ ಬಲೆ ಬೀಸಿದ್ದಾರೆ.