ಗದಗ: ವ್ಯಕ್ತಿಯೊಬ್ಬ ಪತ್ನಿ ಮತ್ತು 9 ತಿಂಗಳ ಮಗುವನ್ನು ಬರ್ಬರವಾಗಿ ಕೊಲೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದೆ.
ನಿರ್ಮಲಾ ಮೃತ ಮಹಿಳೆ. ಆರೋಪಿ ರಮೇಶ್ ನಿದ್ರೆಯಲ್ಲಿದ್ದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದು, ಪಕ್ಕದಲ್ಲಿ ಮಲಗಿದ್ದ 9 ತಿಂಗಳು ಮುದ್ದು ಕಂದನನ್ನು ಉಸಿರಿಗಟ್ಟಿಸಿ ಕೊಂದಿದ್ದಾನೆ.
ಏನಿದು ಪ್ರಕರಣ?
12 ವರ್ಷದ ಹಿಂದೆ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದ ನಿರ್ಮಲಾ ಜೊತೆ ರಮೇಶ್ ಮದುವೆಯಾಗಿದ್ದನು. ಮದುವೆಯಾದ ನಂತರ ಇಬ್ಬರು ಸಣ್ಣಪುಟ್ಟ ಜಗಳ ಇದ್ದರೂ ಚೆನ್ನಾಗಿ ಸಂಸಾರ ಮಾಡಿಕೊಂಡು ಇದ್ದರು. ಈ ದಂಪತಿಗೆ ಮೂರು ಹೆಣ್ಣುಮಕ್ಕಳು ಆಗಿದ್ದವು. ಆದರೆ ಅವರಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಬಹಳ ವರ್ಷಗಳ ಬಳಿಕ ಗಂಡು ಮಗುವಾಗಿತ್ತು. ಹೀಗಾಗಿ ತಾಯಿ ನಿರ್ಮಲಾ ಮತ್ತು ಕುಟುಂಬ ಖುಷಿಯಲ್ಲಿ ಇದ್ದರು.
ಇತ್ತೀಚೆಗೆ ಆರೋಪಿ ರಮೇಶ್ಗೆ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನ ಬಂದಿದೆ. ಈ ವಿಚಾರವಾಗಿ ಮನೆಯಲ್ಲಿ ಜಗಳವಾಗುತ್ತಿತ್ತು. ಅನೈತಿಕ ಸಂಬಂಧದ ವಿಚಾರವಾಗಿಯೇ ಗುರುವಾರ ಮುಂಜಾನೆ ಪತ್ನಿ ಮತ್ತು ಮಗು ಮಲಗಿದ್ದಾಗಲೇ ಆರೋಪಿ ಕೊಲೆ ಮಾಡಿದ್ದಾನೆ.
ಆರೋಪಿ ರಮೇಶ್ ಕೊಲೆ ಮಾಡಿ ನೇರವಾಗಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ತಕ್ಷಣ ಎಸ್ಪಿ ಶ್ರೀನಾಥ್ ಜೋಶಿ ಹಾಗೂ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಆರೋಪಿ ರಮೇಶ್ ವಿಚಾರಣೆ ಮಾಡಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಅನೈತಿಕ ವಿಷಯವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ ಅಂತ ಎಸ್ಪಿ ಹೇಳಿದ್ದಾರೆ.