ಚಿಕ್ಕೋಡಿ: ಅಣ್ಣ ಹೆಚ್ಚು ಹೆಚ್ಚು ಹಣ (Money) ಸಂಪಾದನೆ ಮಾಡಿ ಬೆಳವಣಿಗೆ ಆಗುವುದನ್ನು ಸಹಿಸದೇ, ಸ್ವಂತ ತಮ್ಮನೇ ಅಣ್ಣನನ್ನ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದ ಘಟನೆ ಹುಕ್ಕೇರಿ (Hukkeri) ತಾಲೂಕಿನ ಪಾಶ್ಚಾಪೂರ ಗ್ರಾಮದದಲ್ಲಿ ನಡೆದಿದೆ.
ಹಟ್ಟಿ ಆಲೂರು ಗ್ರಾಮದ ರಾಯಪ್ಪ ಕಮತಿ (28) ಹತ್ಯೆಯಾದ ದುರ್ದೈವಿ. ಈತನ ತಮ್ಮ ಬಸವರಾಜ ಕಮತಿ ಹತ್ಯೆಗೈದ ಆರೋಪಿಯಾಗಿದ್ದಾನೆ.
ಒಂದು ತಿಂಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ರಾಯಪ್ಪ ಕಮತಿ ಕುರಿ ಮೇಯಿಸಲು ತೆರಳಿದ್ದಾಗ ಹತ್ಯೆಯಾಗಿತ್ತು. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ (Police) ಯಾವುದೇ ಸುಳಿವು ಸಿಕ್ಕಿರಲಿಲ್ಲ. ಒಂದು ತಿಂಗಳ ತನಿಖೆ ಬಳಿಕ ಕೊಲೆ ಮಾಡಿರುವುದು ಹತ್ಯೆಯಾದವನ ತಮ್ಮನೇ ಎಂದು ಗೊತ್ತಾಗಿದೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಮಂಗಳೂರಿಗೆ ಆಗಮಿಸಿದ ಎನ್ಐಎ ತಂಡ
ಯಮನಕನಮರಡಿ ಇನ್ಸ್ಪೆಕ್ಟರ್ ಜಾವೇದ ಮುಶಾಪುರೆ ಹಾಗೂ ಅವರ ತಂಡ ಕೊಲೆ ಆರೋಪಿಯನ್ನು ಪತ್ತೆಮಾಡಿದ್ದೇ ರೋಚಕ! ಅಷ್ಟಕ್ಕೂ ಆರೋಪಿ ಕೊಲೆಗೂ ಮುನ್ನ ಮೊಬೈಲ್ನ್ನು (Mobile) ಮನೆಯಲ್ಲೇ ಇಟ್ಟು ಹೋಗಿದ್ದ. ಇದರಿಂದ ಟೆಕ್ನಿಕಲ್ ಎವಿಡೆನ್ಸ್ ಕೂಡ ಸಿಕ್ಕಿರಲಿಲ್ಲ. ಹಂತಕ ಚಾಪೆ ಕೆಳಗೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರಿ ಆತನ ಬಾಯ್ಬಿಡಿಸಿದ್ದಾರೆ.
ಕೊಲೆಗಾರ ಬಸವರಾಜ್, ಕೊಲೆ ಮಾಡಿ ಮನೆಗೆ ಬಂದು ಆರಾಮಾಗಿ ಯಾವುದೇ ಸಂಶಯ ಬಾರದಂತೆ ಇದ್ದ. ಈತನ ಅಣ್ಣ ನಾಪತ್ತೆ ಆಗಿದ್ದಾನೆ ಎಂಬ ವಿಚಾರ ಸುದ್ದಿಯಾಗುತ್ತದೆಯೋ ಆಗ ಮನೆಯಲ್ಲಿ, ಅಣ್ಣನನ್ನು ಹುಡುಕಲು ಹೇಳಿದ್ದಾರೆ. ಈ ವೇಳೆ ಆರೋಪಿ, ಅಣ್ಣನ ಮೊಬೈಲ್ಗೆ ಒಂದೇ ಸಲ ಕರೆ ಮಾಡಿ ಸುಮ್ಮನಾಗಿದ್ದ. ಇದು ಪೊಲೀಸರ ಗಮನಕ್ಕೆ ಬಂದ ಮೇಲೆ, ಅಣ್ಣನನ್ನು ಹುಡುಕಬೇಕಿದ್ದರೆ ಸತತವಾಗಿ ಆತನ ಮೊಬೈಲ್ಗೆ ಕರೆ ಮಾಡಬೇಕಿದ್ದ ತಮ್ಮ, ಯಾಕೆ ಒಂದೇ ಬಾರಿ ಕರೆ ಮಾಡಿದ್ದ ಎಂದು ಆಲೋಚಿಸಿದ್ದರು. ಆತನನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದಾಗ, ಸತ್ಯ ಬಯಲಿಗೆ ಬಂದಿದೆ.
ಅಣ್ಣ ಹೆಚ್ಚು ದುಡಿದು ಹೆಚ್ಚು ಸಂಪಾದನೆ ಮಾಡಿದ್ದನ್ನ ಸಹಿಸದೇ ಕೊಲೆ ಮಾಡಿರುವುದಾಗಿ ತಮ್ಮ ಬಸವರಾಜ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: 1.57 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕೇರ್ ಟೇಕರ್ ಲೇಡಿ ಅರೆಸ್ಟ್