ಬಿಜೆಪಿ ಶಾಸಕಿಯ ಕಾರು ಡಿಕ್ಕಿ, ವ್ಯಕ್ತಿಗೆ ಗಂಭೀರ ಗಾಯ

Public TV
1 Min Read

ಚಿತ್ರದುರ್ಗ: ಬಿಜೆಪಿ ಶಾಸಕ ಸಿ.ಟಿ.ರವಿ ಕಾರು ಡಿಕ್ಕಿಹೊಡೆದು ಇಬ್ಬರು ಮೃತಪಟ್ಟ ಘಟನೆಯ ಬೆನ್ನಲ್ಲೇ ಬಿಜೆಪಿಯ ಶಾಸಕಿಗೆ ಸೇರಿದ ಕಾರು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ.

ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಪ್ರವಾಸಿಮಂದಿರದ ಬಳಿ ನಡೆದಿದೆ.

ಹಿರಿಯೂರು ಪಟ್ಟಣದ ವಾಟರ್ ಟ್ಯಾಂಕ್ ಬಳಿಯ ನಿವಾಸಿ ಅಬ್ದುಲ್ ರೆಹಮಾನ್ ಗಾಯಗೊಂಡ ವ್ಯಕ್ತಿ. ಅಬ್ದುಲ್ ರೆಹಮಾನ್ ಮೂಗು, ಬೆನ್ನಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸೇರಿರುವ ಕೆಎ-53, ಎಂಡಿ 8568 ಫಾರ್ಚುನರ್ ಕಾರನ್ನು ಹಿಂದಕ್ಕೆ ತಿರುಗಿಸುವಾಗ ಅಬ್ದುಲ್‍ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿ ಶಾಸಕಿ ಪೂರ್ಣಿಮಾ ಅವರು ಕಾರಲ್ಲಿ ಇರಲಿಲ್ಲ ಎಂದು ಚಿತ್ರದುರ್ಗ ಎಸ್‍ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಈ ಕುರಿತು ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ಶಾಸಕಿ ಪೂರ್ಣಿಮಾ ಅವರು, ಹಿರಿಯೂರು ಪ್ರವಾಸಿ ಮಂದಿರದ ಆವರಣದಲ್ಲಿ ಅಬ್ದುಲ್ ರೆಹಮಾನ್ ಕುಡಿದು ಬಿದ್ದಿದ್ದರು. ನಾನೇ ಮುಂದೆನಿಂತು ಅವರನ್ನು ಆಸ್ಪತ್ರೆಗೆ ಕಳುಹಿಸಿದ್ದೇನೆ. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೂ ಸೂಚನೆ ನೀಡಿರುವೆ ಬಳಿಕ ಪ್ರವಾಸಿ ಮಂದಿರದಿಂದ ಬೆಂಗಳೂರಿಗೆ ತೆರಳಿದ್ದೇನೆ. ದುರುದ್ದೇಶದಿಂದ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ನಮ್ಮ ಕಾರು ಡಿಕ್ಕಿ ಆಗಿದೆ ಎಂಬುದು ಶುದ್ಧ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಘಟನೆಯ ಸಂಬಂಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಶಾಸಕಿ ಪೂರ್ಣಿಮಾ ಅವರ ಕಾರು ಚಾಲಕ ಮಲ್ಲಿಕಾರ್ಜುನ ವಿರುದ್ಧ ಐಪಿಸಿ ಕಲಂ 279 (ಸಾರ್ವಜನಿಕ ಸ್ಥಳದಲ್ಲಿ ದುಡುಕಿನಿಂದ ವಾಹನ ನಡೆಸುವುದು) ಹಾಗೂ 337 (ಇತರರ ಪ್ರಾಣಕ್ಕೆ ಅಪಾಯವನ್ನು ಉಂಟು ಮಾಡುವುದು) ಅನ್ವಯ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *