ಕಾಲು ಜಾರಿ ಮಧುಗಿರಿ ಬೆಟ್ಟದಿಂದ 600 ಅಡಿ ಪ್ರಪಾತಕ್ಕೆ ಬಿದ್ದ ವ್ಯಕ್ತಿ ಶವವನ್ನು ಹೊರ ತೆಗೆದ ಕೋತಿರಾಜ್

Public TV
2 Min Read

ತುಮಕೂರು: ಜಿಲ್ಲೆ ಮಧುಗಿರಿಯ ಏಕಶಿಲಾ ಬೆಟ್ಟದಿಂದ ಬುಧವಾರ ವ್ಯಕ್ತಿಯೊಬ್ಬ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದ. ಆತನ ಮೃತ ದೇಹ ಮೇಲೆ ತರಲು ಸಾಹಸವೇ ನಡೆದಿದ್ದು, ಇಂದು ಮಧ್ಯಾಹ್ನ ಸ್ಪೈಡರ್ ಮ್ಯಾನ್ ಖ್ಯಾತಿಯ ಚಿತ್ರದುರ್ಗದ ಜ್ಯೋತಿರಾಜ್ ಯಶಸ್ವಿಯಾಗಿ ಶವವನ್ನು ಮೇಲೆ ತಂದಿದ್ದಾರೆ.

ಮಧುಗಿರಿ ತಾಲೂಕಿನ ತುಂಗೋಟಿ ಗ್ರಾಮದ ಹನುಮಂತರಾಯ (40) ಬೆಟ್ಟದಿಂದ ಕಾಲುಜಾರಿ ಬಿದ್ದಿದ್ದ ವ್ಯಕ್ತಿ. ಬುಧವಾರ ಬೆಟ್ಟ ಹತ್ತಿದ್ದ ಹನುಮಂತರಾಯ ಬಂಡೆಯ ಮೇಲಿದ್ದ ಪಾಚಿಯ ಮೇಲೆ ಕಾಲಿಟ್ಟಿದ್ದರು. ಇದರಿಂದಾಗಿ ಜಾರಿ 600 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದರು. ನಿನ್ನೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಎಷ್ಟೇ ಹರಸಾಹಪಟ್ಟರೂ ಮೃತ ದೇಹವನ್ನು ಮೇಲೆತ್ತಲು ಆಗಿರಲಿಲ್ಲ.

ಕಳೆದ ಒಂದು ವಾರದಿಂದ ತುಂತುರು ಮಳೆ ಸುರಿಯುತ್ತಿದ್ದು, ಬಂಡೆಗಳ ಮೇಲೆ ಪಾಚಿ ಹೆಚ್ಚಾಗಿತ್ತು. ಬೆಟ್ಟ ಹತ್ತಿದ್ದ ಹನುಮಂತಪ್ಪ ಪಾಚಿಯ ಮೇಲೆ ಕಾಲು ಇಟ್ಟಿದ್ದು, ಜಾರಿ ಕೆಳಗೆ ಬಿದ್ದಿದ್ದು. ಈ ಕುರಿತು ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಮಧುಗಿರಿ ಟೌನ್ ಪೊಲೀಸರು 600 ಅಡಿ ಕೆಳಗಿಳಿದು ಮೃತ ದೇಹವನ್ನು ಮೇಲಕ್ಕೆ ತರಲು ಹರಸಾಹಸಪಟ್ಟರು ಆಗಲಿಲ್ಲ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಲಾಯಿತಾದರೂ, ಅವರು ಕೂಡ ಪ್ರಪಾತಕ್ಕೆ ಇಳಿಯುವ ಸಾಹಸಕ್ಕೆ ಕೈ ಹಾಕಲಿಲ್ಲ.

ಸ್ಥಳೀಯರೊಬ್ಬರು ಚಿತ್ರದುರ್ಗದ ಜ್ಯೋತಿರಾಜು (ಕೋತಿರಾಜು) ಅವರನ್ನು ಕರೆಸುವಂತೆ ಸಲಹೆ ನೀಡಿದ್ದರು. ಹೀಗಾಗಿ ನಿನ್ನೆ ಸಂಜೆ ಹೊತ್ತಿಗೆ ಜ್ಯೋತಿರಾಜ್ ಹಾಗೂ ಆತನ ತಂಡ ಸ್ಥಳಕ್ಕೆ ಬಂದಿದ್ದು, ಕತ್ತಲಾಗುತ್ತಿದ್ದರಿಂದ ಬೆಳಗ್ಗೆ ಶವ ಮೇಲೆತ್ತುವ ಕೆಲಸ ಮಾಡುವುದಾಗಿ ಒಪ್ಪಿಕೊಂಡಿದ್ದರು. ಇಂದು ಬೆಳಗ್ಗೆ 7 ಗಂಟೆಗೆ ಬೆಟ್ಟ ಹತ್ತಿದ ಜ್ಯೋತಿ ರಾಜ್ ಮತ್ತು ಮಧುಗಿರಿಯ ಜ.ಬಿ.ಬಸವರಾಜ್ ಕಾರ್ಯಾಚರಣೆಗೆ ಮುಂದಾದರು. 600 ಅಡಿ ಎತ್ತರದ ಮೇಲೆ ಹಗ್ಗವನ್ನು ಕಟ್ಟಿ ಅದರ ಸಹಾಯದಿಂದ ಇಬ್ಬರು ಕೆಳಗೆ ಇಳಿದು, ಬಳಿಕ ಒಂದು ಚೀಲದಲ್ಲಿ ಶವವನ್ನು ಕಟ್ಟಿ ಮೇಲೆ ಕಳುಹಿಸಿ, ಬಳಿಕ ತಾವು ಬೆಟ್ಟ ಹತ್ತಿದ್ದಾರೆ.

ಬೆಟ್ಟದ ಮೇಲೆ ಸೇರಿದ್ದ ಸ್ಥಳೀಯರು ಹಾಗೂ ಮೃತನ ಸಂಬಂಧಿಕರು ಶವವನ್ನು ಹೊತ್ತು ಕೆಳಗೆ ತಂದರು. ಸತತ 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಶವವನ್ನು ಯಶಸ್ವಿಯಾಗಿ ಕೆಳಗೆ ತಂದ ಜ್ಯೋತಿರಾಜ್, ಜ.ಬಿ.ಬಸವರಾಜ್ ಮತ್ತು ಇತರ ಸಾಹಸಿಗಳನ್ನು ಪೊಲೀಸರು ಮತ್ತು ಮಧುಗಿರಿ ಜನತೆ ಅಭಿನಂದಿಸಿದ್ದಾರೆ.

https://www.youtube.com/watch?v=mouxXeqxL8g

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *