ಮೈಸೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಎರಡು ಜೀವ ಬಲಿಯಾಗಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹೊರಳಳ್ಳಿ ಗ್ರಾಮದಲ್ಲಿ ನಡೆದಿದೆ.
ಸಿದ್ದರಾಜು ಕೊಲೆಯಾದ ಪತಿ. ಮಹದೇವ ಆತ್ಮಹತ್ಯೆಗೆ ಶರಣಾದ ಪ್ರಿಯಕರ. ಮಹದೇವನಿಗೆ ಸಿದ್ದರಾಜು ಪತ್ನಿಯ ಜೊತೆ ಅನೈತಿಕ ಸಂಬಂಧ ಇತ್ತು. ಆದರೆ ಈಗ ತನ್ನ ಪ್ರೇಯಸಿಯ ಗಂಡನನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆಗೆ ನೇಣಿಗೆ ಶರಣಾಗಿದ್ದಾನೆ.
ನಡೆದಿದ್ದೇನು?: ಸಿದ್ದರಾಜು ಪತ್ನಿ ಕಾವ್ಯ (ಹೆಸರು ಬದಲಾಯಿಸಲಾಗಿದೆ) ಜೊತೆ ಮಹದೇವನಿಗೆ ಅನೈತಿಕ ಸಂಬಂಧ ಇತ್ತು. ಇವರಿಬ್ಬರ ಅನೈತಿಕ ಸಂಬಂಧದ ಬಗ್ಗೆ ಸಿದ್ದರಾಜುಗೆ ಗೊತ್ತಾಗಿದೆ. ನಂತರ ಪತಿ ಕಾವ್ಯಳ ಜೊತೆ ಗಲಾಟೆ ಮಾಡಿದ್ದಾನೆ. ಈ ಗಲಾಟೆ ವಿಚಾರವನ್ನು ಕಾವ್ಯ ಪ್ರಿಯಕರನಿಗೆ ತಿಳಿಸಿದ್ದಾಳೆ. ನಂತರ ಪ್ರಿಯಕರ ಮಹದೇವ ತನ್ನ ಸ್ನೇಹಿತ ಸಿದ್ದಪ್ಪಾಜಿ ಜೊತೆ ಸೇರಿ ಸಿದ್ದರಾಜುವಿನ ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.
ಇತ್ತ ಪತ್ನಿ ಕಾವ್ಯ ಪತಿ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಮಾಡುವ ವೇಳೆ ಕಾವ್ಯ ಮತ್ತು ಆರೋಪಿ ಮಹದೇವನ ಅನೈತಿಕ ಸಂಬಂಧ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಆರೋಪಿ ಸಿದ್ದಪ್ಪಾಜಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮಹದೇವನಿಗೆ ತನ್ನ ಸ್ನೇಹಿತ ಸಿದ್ದಪ್ಪಾಜಿ ಅರೆಸ್ಟ್ ಆದ ವಿಚಾರ ತಿಳಿದಿದೆ. ಇದರಿಂದ ಭಯಗೊಂಡು ಮಹದೇವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯಕ್ಕೆ ಪತ್ನಿ ಕಾವ್ಯ ಮತ್ತು ಪ್ರಿಯಕರನ ಸ್ನೇಹಿತ ಸಿದ್ದಪ್ಪಾಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.