ಹೈದರಾಬಾದ್: ಫೇಸ್ ಬುಕ್ನಲ್ಲಿ 20 ಮಹಿಳೆಯರಿಗೆ ಮೋಸ ಮಾಡಿದ ವ್ಯಕ್ತಿಯನ್ನು ರಾಚಕೊಂಡ ಪೊಲೀಸರು ಮಂಗಳವಾರದಂದು ಹೈದರಾಬಾದ್ನಲ್ಲಿ ಬಂಧಿಸಿದ್ದಾರೆ.
ರಂಗಸ್ವಾಮಿ ಬಂಧಿತ ಆರೋಪಿ. ಆರೋಪಿ ಮೂಲತಃ ಅನಂತಪುರದವನಾಗಿದ್ದು, ಹೈದರಬಾದ್ನಲ್ಲಿ ವಾಸಿಸುತ್ತಿದ್ದ. ತನ್ನ ಓದನ್ನು ಅರ್ಧದಲ್ಲೇ ನಿಲ್ಲಿಸಿದ್ದ ಈತ ಫೇಸ್ಬುಕ್ ನಲ್ಲಿ ಮಹಿಳೆಯರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ನಂತರ ಅವರನ್ನು ನೇರವಾಗಿ ಭೇಟಿ ಮಾಡಿ ಪ್ರೀತಿಯ ನಾಟಕವಾಡ್ತಿದ್ದ. ಅವರ ವಿಶ್ವಾಸವನ್ನು ಗಳಿಸಿದ ನಂತರ ಹಣ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗುತ್ತಿದ್ದ.
ರಂಗಸ್ವಾಮಿಯಿಂದ ಮೋಸ ಹೋದವರು ಸಿಕಂದರಾಬಾದ್ ನ ನಚಾರಾಮ್, ಲಾಲ್ಪೇಟ್ ಹಾಗೂ ಲಾಲಗುಡದ ನಿವಾಸಿಗಳಾಗಿದ್ದು, ಎಂಎನ್ಸಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಮೋಸ ಹೋದವರು ಭಯ ಹಾಗೂ ಮುಜುಗರದಿಂದ ಆರೋಪಿ ವಿರುದ್ಧ ದೂರನ್ನು ದಾಖಲಿಸಿರಲಿಲ್ಲ. ನಂತರ ಒಬ್ಬರು ಯುವತಿ ಬಂದು ರಂಗಸ್ವಾಮಿ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ರಂಗಸ್ವಾಮಿ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿ ಹಣ ಮತ್ತು ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾನೆ ಎಂದು ಯುವತಿ ದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವಾರು ಸಂದರ್ಭಗಳಲ್ಲಿ ರಂಗಸ್ವಾಮಿ ನನಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದಾನೆ ಎಂದು ಯುವತಿ ತನ್ನ ದೂರಿನಲ್ಲಿ ಹೇಳಿದ್ದಾರೆ. ಯುವತಿ ದೂರು ದಾಖಲಿಸುತ್ತಿದ್ದಂತೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ಆರೋಪಿಗಾಗಿ ಬಲೆ ಬೀಸಿದ್ದರು.
ಸದ್ಯ ಪೊಲೀಸರು ಆರೋಪಿ ರಂಗಸ್ವಾಮಿಯನ್ನ ಬಂಧಿಸಿದ್ದಾರೆ. ರಂಗಸ್ವಾಮಿಯ ವಿರುದ್ಧ ಹಲವಾರು ಕಳ್ಳತನ ಹಾಗೂ ಕೊಲೆ ಪ್ರಕರಣಗಳು ದಾಖಲಾಗಿದ್ದು, ಈ ಹಿಂದೆ ಜೈಲು ಶಿಕ್ಷೆ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.