ನಿವೇಶನ ಕೊಡಸ್ತಿನಿ ಯಾರಿಗೂ ಹೇಳ್ಬೇಡಿ ಅಂದ-ನೂರಾರು ಮಹಿಳೆಯರಿಂದ ಹಣ ಪಡೆದು ಎಸ್ಕೇಪ್

Public TV
1 Min Read

ಬಳ್ಳಾರಿ: ನೀವೆಲ್ಲ ಕನ್ನಡದ ‘ಯಾರಿಗೂ ಹೇಳ್ಬೇಡಿ’ ಸಿನಿಮಾ ನೋಡಿರಬಹುದು. ಚಿತ್ರದಲ್ಲಿ ನಾಯಕ ನಟ ಅನಂತ್ ನಾಗ್ ನಿವೇಶನ ಕೊಡಿಸೋದಾಗಿ ಹೇಳಿ ಮಹಿಳೆಯರಿಗೆ ವಂಚಿಸುತ್ತಾ ಹೋಗುತ್ತಾರೆ. ಅದೇ ರೀತಿಯಲ್ಲಿ ನಿವೇಶನ ಕೊಡಿಸುತ್ತೇನೆ ಅಂತಾ ಹೇಳಿ ಲಕ್ಷಗಟ್ಟಲೇ ಹಣ ನುಂಗಿ ವ್ಯಕ್ತಿಯೊಬ್ಬ ಓಡಿ ಹೋಗಿದ್ದಾನೆ.

ಬಳ್ಳಾರಿಯಲ್ಲಿ ಈ ಘಟನೆ ನಡೆದಿದ್ದು, ವಿಜಯಕುಮಾರ್ ಎಂಬಾತನಿಂದ ನೂರಾರು ಮಹಿಳೆಯರು ಮೋಸಕ್ಕೆ ಒಳಗಾಗಿದ್ದಾರೆ. ವಿಜಯ್ ಗಾರ್ಮೆಂಟ್ ಎಕ್ಸ್ ಪೋರ್ಟ್ ಕ್ಲಸ್ಟರ್ ಪ್ರವೇಟ್ ಲಿಮಿಟೆಡ್ ಸಂಸ್ಥೆಯ ಹೆಸರಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ನೂರಾರು ಮಹಿಳೆಯರ ಬಳಿ ಹಣ ಪಡೆದಿದ್ದನು. 2015ರಿಂದ ನೂರಾರು ಜನರಿಂದ ಕಂತುಗಳಲ್ಲಿ ಲಕ್ಷಾಂತರ ರೂಪಾಯಿ ಪಡೆದಿದ್ದ ಈತ 2 ವರ್ಷದಲ್ಲಿ ಲೇಔಟ್ ಮಾಡಿ ನಿವೇಶನ ನೀಡುವುದಾಗಿ ನಂಬಿಸಿದ್ದನು. ಆದರೆ ಈಗ ಎಲ್ಲ ಹಣದೊಂದಿಗೆ ಪರಾರಿಯಾಗಿದ್ದಾನೆ.

ಮನೆಯಲ್ಲಿ ಪತಿಗೂ ತಿಳಿಸದೆ ಹಣ ನೀಡಿದ್ದ ಮಹಿಳೆಯರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಬಳ್ಳಾರಿ ಎಪಿಎಂಸಿ ಠಾಣೆ ಪೊಲೀಸರು ಪರಾರಿಯಾಗಿರುವ ಆರೋಪಿ ವಿಜಯಕುಮಾರಗಾಗಿ ಹುಡುಕಾಟ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *