3 ವರ್ಷಗಳಿಂದ ಪ್ರೀತ್ಸಿ, ಮದ್ವೆಯಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡು ಶಿಕ್ಷಕಿಗೆ ಮೋಸ!

Public TV
1 Min Read

ರಾಯಚೂರು: ಮೂರು ವರ್ಷಗಳಿಂದ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ದೈಹಿಕವಾಗಿ ಬಳಸಿಕೊಂಡು ಕೊನೆಗೆ ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ಶಿಕ್ಷಕಿಗೆ ಪ್ರಿಯಕರ ವಂಚನೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಹೊಳೆಗಂಗಮ್ಮ ಮೋಸ ಹೋದ ಶಿಕ್ಷಕಿ. ಈಕೆ ನಾಲ್ಕು ವರ್ಷಗಳ ಹಿಂದೆ ಪರಿಚಯವಾದ ಪುಸ್ತಕ ಅಂಗಡಿ ವ್ಯಾಪಾರಿ ಉಮೇಶ್ ನನ್ನು ಮೂರು ವರ್ಷಗಳ ಕಾಲ ಪ್ರೀತಿಸಿದ್ದಾರೆ. ನಂತರ ಉಮೇಶ್ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಜನವರಿ 28 ,2017 ರಂದು ಮದುವೆ ನಡೆಯುವಂತೆ ನಿಶ್ಚಯ ಮಾಡಿಕೊಂಡು ವಿವಾಹ ಪತ್ರವನ್ನೂ ಮುದ್ರಿಸಿದ್ದಾರೆ.

ಆದ್ರೆ ಮದುವೆ ಕಾರ್ಡ್ ಪ್ರಿಂಟ್ ಹಾಕಿಸಿ, ಪದೇ ಪದೇ ಮದುವೆ ಮುಂದೂಡಿ ಈಗ ನೀನ್ಯಾರೋ ನಾನ್ಯಾರೋ ಎನ್ನುತ್ತಿದ್ದು, ಇನ್ನೇನು ಮದುವೆ ಆಗುತ್ತೆ ಎಂದು ಆಸೆಯಿಟ್ಟುಕೊಂಡಿದ್ದ ರಾಯಚೂರಿನ ಶಿಕ್ಷಕಿ ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

ವಿವಾಹ ನೋಂದಣಿ ಕಚೇರಿಯಲ್ಲಿ ಮದುವೆಯಾಗುವುದಾಗಿ ಹೇಳಿ ಉಮೇಶ್ ಪದೇ ಪದೇ ಮದುವೆ ಮುಂದೂಡಿದ್ದಾನೆ. ಅಲ್ಲದೆ ಮೂರು ವರ್ಷದಿಂದ ದೈಹಿಕ ಸಂಪರ್ಕದಲ್ಲಿದ್ದರೂ ಮಕ್ಕಳಾಗದಿರುವುದರಿಂದ ವೈದ್ಯರಲ್ಲೂ ಚಿಕಿತ್ಸೆ ಪಡೆದಿದ್ದಾರೆ. ಆರು ತಿಂಗಳ ಚಿಕಿತ್ಸೆ ಪಡೆದರೆ ಮಕ್ಕಳಾಗುತ್ತವೆ ಎಂದು ವೈದ್ಯರು ತಿಳಿಸಿದ್ದರಂತೆ. ಆದರೆ ಈಗ ಜಾತಿ ಬೇರೆ ಎಂದು ಮನೆಯಲ್ಲಿ ಒಪ್ಪುತ್ತಿಲ್ಲ ಎನ್ನುವ ಕಾರಣ ಹೇಳಿ ಉಮೇಶ್ ದೂರವಾಗಿದ್ದಾನೆ. ಮನೆಯಲ್ಲಿ ತಂಗಿಯರ ಮದುವೆಯಾಗಬೇಕು ಎಂದು ಮೂರು ವರ್ಷ ಕಾಯಿಸಿ ಕೊನೆಗೆ ಕೈಕೊಟ್ಟಿದ್ದಾನೆ. ಮದುವೆ ಮಾಡಿಸುತ್ತೇವೆ ಎಂದು ಮಧ್ಯಸ್ಥಿಕೆ ವಹಿಸಿಕೊಂಡವರು ಸಹ ಮೋಸ ಮಾಡಿದ್ದಾರೆ ಎಂದು ಹೊಳೆಗಂಗಮ್ಮ ಆರೋಪಿಸಿದ್ದಾರೆ.

ಮೂರು ವರ್ಷ ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ಹಟ್ಟಿ ಪೊಲೀಸ್ ಠಾಣೆಯಲ್ಲಿ ಉಮೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿದ್ದಕ್ಕೆ ಉಮೇಶ್ ಕಡೆಯವರು ಹಲ್ಲೆಗೆ ಯತ್ನಿಸಿದ್ದರಿಂದ ಹೊಳೆಗಂಗಮ್ಮ ಭಯದಲ್ಲಿ ಬದುಕುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *