ಮಂಗಳವಾರ ಮೋದಿ ಭೇಟಿಯಾಗಲಿದ್ದಾರೆ ಮಮತಾ

Public TV
2 Min Read

ನವದೆಹಲಿ: ಸಮಯ ಸಿಕ್ಕಾಗಲೆಲ್ಲ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಮಮತಾ ಬ್ಯಾನರ್ಜಿಯವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದು, ಭಾರೀ ಕುತೂಹಲ ಕೆರಳಿಸಿದೆ. ಈ ಮೂಲಕ ಲೋಕಸಭಾ ಚುನಾವಣೆ ನಂತರ ಮೋದಿ ಹಾಗೂ ದೀದಿಯವರ ಮೊದಲ ಭೇಟಿ ಇದಾಗಿದೆ.

ಮೂಲಗಳ ಪ್ರಕಾರ ನಾಳೆ ದೆಹಲಿಗೆ ತೆರಳಲಿರುವ ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ಹೆಸರು ಬದಲಾವಣೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಅಲ್ಲದೆ ಇಂಗ್ಲಿಷಿನ ‘ವೆಸ್ಟ್’ ತೆಗೆದು ಬಂಗಾಳ ಎಂದು ಬದಲಿಸಲು ಬಯಸಿದೆ. ಈ ಹಿಂದೆ ಬಜೆಟ್ ಅಧಿವೇಶನದ ವೇಳೆ ಸುದೀಪ್ ಬಂದೋಪಾಧ್ಯಾಯ ನೇತೃತ್ವದ ಪಕ್ಷದ ನಿಯೋಗವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಈ ಬೇಡಿಕೆಯನ್ನು ಇಟ್ಟಿತ್ತು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.

ಅಜೆಂಡಾದಲ್ಲಿ ಡನ್‍ಲಾಪ್ ಕಾರ್ಖಾನೆಯನ್ನು ರಾಜ್ಯದ ಸುಪರ್ದಿಗೆ ಪಡೆಯುವುದು ಸಹ ಸೇರಿದೆ. ಈ ಕುರಿತು ರಾಷ್ಟ್ರಪತಿಗಳ ಅಂಕಿತ ಹಾಕುವುದನ್ನು ನಿರೀಕ್ಷಿಸಲಾಗುತ್ತಿದೆ. ಅಲ್ಲದೆ, ಮನ್ರೇಗಾ(ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಇದರ ಧನಸಹಾಯದ ಕುರಿತು ಸಹ ಚರ್ಚಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಸದಾ ಟೀಕಿಸುವ ಮಮತಾ ಬ್ಯಾನರ್ಜಿ ರಾಜ್ಯದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುವುದು ಸೇರಿದಂತೆ ಅನೇಕ ವಿಷಯಗಳ ಕುರಿತು ಕೇಂದ್ರ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಟಿಎಂಸಿ ಮತ್ತು ಎಡ ಪಕ್ಷಗಳಿಗೆ ಶಾಕ್ ನೀಡಿತ್ತು.

ಇತ್ತೀಚೆಗೆ ಪ್ರಧಾನಿ ಮೋದಿ ಚಂದ್ರಯಾನದ-2ನ ವಿಕ್ರಂ ಲ್ಯಾಂಡರ್ ಚಂದ್ರನಲ್ಲಿ ಲ್ಯಾಂಡ್ ಅಗುವುದನ್ನು ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದಾಗಲೂ ಟೀಕಿಸಿದ್ದರು. ಈ ಹಿಂದೆ ಯಾವುದೇ ಸರ್ಕಾರ ಚಂದ್ರಯಾನದಂತಹ ಪ್ರಯತ್ನ ಮಾಡಿಲ್ಲವೇ ಬಿಜೆಪಿ ಸರ್ಕಾರ ಮಾತ್ರ ಮೊದಲ ಬಾರಿಗೆ ಮಾಡುತ್ತಿದೆಯೇ ಎಂದು ಹರಿಹಾಯ್ದಿದ್ದರು.

ಕಳೆದ ವರ್ಷ ಮಾರ್ಚ್‍ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಈ ವೇಳೆ ರಾಜ್ಯ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದರು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *