ಖರ್ಗೆ ಕೋಟೆಯಲ್ಲಿಂದು ಸಿದ್ದು ಶಕ್ತಿ ಪ್ರದರ್ಶನ

Public TV
1 Min Read

ಕಲಬುರಗಿ: ಸದ್ಯ ರಾಜ್ಯ ಕಾಂಗ್ರೆಸ್‍ನಲ್ಲಿ ಮೂಲ ಹಾಗೂ ವಲಸಿಗ ಕಾಂಗ್ರೆಸಿಗರ ಮಧ್ಯೆ ಜಗಳ ತಾರಕ್ಕಕೇರಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿರಿಯ ಕೈ ನಾಯಕರು ತೆರೆಮರೆಯಲ್ಲಿ ಸಮರವನ್ನೆ ಸಾರಿದ್ದಾರೆ. ಇದರ ಮುಂದಾಳತ್ವ ವಹಿಸಿಕೊಂಡಿರೋ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಮ್ಮ ಬೆಂಬಲಿಗರನ್ನ ಸಿದ್ದು ವಿರುದ್ಧ ಎತ್ತಿ ಕಟ್ಟಿದ್ದಾರೆ ಎಂಬ ಸುದ್ದಿಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.

ಈ ಮಾತುಗಳಿಗೆ ಪೂರಕ ಎಂಬಂತೆ ಸಿದ್ದರಾಮಯ್ಯ ಇಂದು ಮಲ್ಲಿಕಾರ್ಜುನ ಖರ್ಗೆ ಅವರ ಅಖಾಡ ಕಲಬುರಗಿಯಲ್ಲಿಯೇ ಕುರುಬ ಸಮಾಜದ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇಂದು ಮಧ್ಯಾಹ್ನ ಪ್ರತಿಭಾ ಕಾರ್ಯಕ್ರಮದ ಹೆಸರಿನಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಕುರುಬ ಸಮಾಜದವರು ಶಕ್ತಿ ಪ್ರದರ್ಶನ ನಡೆಸಲಿದ್ದಾರೆ. ಇದಕ್ಕಾಗಿ ಸುಮಾರು 4 ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಸಹ ಹಾಕಲಾಗಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ ಮಲ್ಲಿಕಾರ್ಜುನ ಖರ್ಗೆ ಮಹಾ ಸಮರದ ನೆಪ ಹೇಳಿ ಗೈರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಸಿದ್ದರಾಮಯ್ಯ ಹಾಗೂ ಖರ್ಗೆ ಮಧ್ಯೆ ನಡೆಯುವ ಶೀತಲ ಸಮರ ಇಲ್ಲಿ ಸಹ ಮುಂದುವರಿಯುತ್ತಿದೆ.

ಒಂದೆಡೆ ಟಗರುಗೆ ಡಿಚ್ಚಿ ಕೊಡಲು ಖರ್ಗೆ ಟೀಂ ಅಖಾಡ ಸಿದ್ದಮಾಡಿಕೊಂಡರೆ ಇತ್ತ, ಖರ್ಗೆ ಅವರಿಗೆ ತವರು ಜಿಲ್ಲೆಯಲ್ಲಿಯೇ ಮತ್ತೆ ಖೆಡ್ಡಾ ತೋಡಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ. ಹೀಗಾಗಿ ಈ ಇಬ್ಬರು ನಾಯಕರ ಶೀತಲ ಸಮರ ಎಲ್ಲಿ ಹೋಗಿ ನಿಲ್ಲುತ್ತೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Share This Article
Leave a Comment

Leave a Reply

Your email address will not be published. Required fields are marked *