ಕಲಬುರಗಿ: ಎಲ್ಲಾ ಕಾಯಿಲೆಗೂ ಔಷಧಿವಿದೆ. ಆದರೆ ಹೊಟ್ಟೆ ಕಿಚ್ಚಿಗೆ ಯಾವುದೇ ಔಷಧಿ ಇಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಸಚಿವ, ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ಟೀಕಿಸುವವರಿಗೆ ತಿರುಗೇಟು ನೀಡಿದರು. ಪ್ರಿಯಾಂಕ್ ಖರ್ಗೆ ಒಬ್ಬನೇ ಎಲ್ಲದಕ್ಕೂ ಹೇಗೆ ಹೊಣೆಯಾಗಲು ಸಾಧ್ಯ ಎಂದು ಪ್ರಶ್ನಿಸಿ, ಕಾಂಗ್ರೆಸ್ ನಾಯಕರ ಟೀಕೆಗಳ ಬಗ್ಗೆ ಅಸಮಾಧಾನ ಹೊರಹಾಕಿದರು.
ನನ್ನನ್ನು ಲೋಕಸಭಾ ಕಳುಹಿಸಿದಾಗ ಪಕ್ಷದ ಮುಖಂಡರು ಒತ್ತಾಯ ಮಾಡಿ ಪ್ರಿಯಾಂಕ್ನನ್ನು ರಾಜಕೀಯಕ್ಕೆ ತಂದರು. ಬಿಜೆಪಿ ಸರ್ಕಾರದ ವಿರುದ್ಧ ನೀವೇ ಮಗನನ್ನು ಕಣಕ್ಕಿಳಿಸಲು ಹೆದರಿದರೆ ಹೇಗೆ ಎಂದು ಸವಾಲು ಹಾಕಿದರು. ಹೀಗಾಗಿ ಪ್ರಿಯಾಂಕ್ ರಾಜಕೀಯಕ್ಕೆ ಕಾಲಿಟ್ಟು ಗೆಲುವು ಸಾಧಿಸಿದ. ಈಗ ನನ್ನ ಮಗನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸುಮಲತಾ ಅಂಬರೀಶ್ ಅವರ ಬಗ್ಗೆ ಲೋಕೋಪಯೋಗಿ ಅಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರಹಾಕಿದರು. ರೇವಣ್ಣ ಒಬ್ಬ ಸೀನಿಯರ್ ಲೀಡರ್ ಇದ್ದಾರೆ. ಅವರು ಆತುರವಾಗಿ ಮಾತನಾಡುವುದು ಸರಿಯಲ್ಲ. ಎಲ್ಲರ ಭಾವನೆಗಳನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಉದ್ವೇಗಕ್ಕೆ ಅವಕಾಶ ಕೊಡದೆ ಸಂಯಮದಿಂದ ಮಾತನಾಡಿದರೆ ಒಳ್ಳೆಯದು. ವಿರೋಧಿಗಳು ಇಂತದ್ದನ್ನೇ ಚುನಾವಣೆಯಲ್ಲಿ ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ಹೀಗಾಗಿ ರೇವಣ್ಣ ಅವರು ತಾಳ್ಮೆ, ಸಂಯಮದಿಂದ ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv