ಉದ್ಯೋಗ ಖಾತ್ರಿ ಕೂಲಿಗೆ ಮನವಿ ಸಲ್ಲಿಸಿ ಮನೆ ಸೇರಬೇಕಾದವರು ಮಸಣ ಸೇರಿದ್ರು

Public TV
1 Min Read

– ಟ್ರ್ಯಾಕ್ಟರ್ ಪಲ್ಟಿ: ನಾಲ್ವರು ದುರ್ಮರಣ, 15ಕ್ಕೂ ಹೆಚ್ಚು ಮಂದಿ ಗಾಯ

ಕೊಪ್ಪಳ: ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಮೂವರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕು ಮುಕ್ಕುಂಪಿ ಗ್ರಾಮದ ಬಳಿ ನಡೆದಿದೆ.

ಗಂಗಾವತಿ ತಾಲೂಕಿನ ಹನುಮಂತಪ್ಪ (60), ಹುಲಿಗೇಮ್ಮ (40), ಪವಾಡೆಪ್ಪ (55) ಮತ್ತು ಅಂಬಮ್ಮ (70) ಮೃತ ದುರ್ದೈವಿಗಳು. ಗಂಗಾವತಿ ತಾಲೂಕು ಹೊಸಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಈ ಟ್ರ್ಯಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಭಾರೀ ಅನಾಹುತ ನಡೆದಿದೆ.

ಆಗಿದ್ದೇನು?:
ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಿದ್ದ ಗಂಗಾವತಿ ತಾಲೂಕಿನ 12 ಪಂಚಾಯತ್ ವ್ಯಾಪ್ತಿಯ ಜನರಿಗೆ ಕೂಲಿಯೇ ಬಂದಿರಲಿಲ್ಲ. ಇದರಿಂದಾಗಿ ಕೂಲಿ ಕಾರ್ಮಿಕರು ಹಣ ನೀಡಲು ಒತ್ತಾಯಿಸಿ ಕೊಪ್ಪಳದ ಜಿಲ್ಲಾ ಕಚೇರಿಯವರೆಗೆ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿದ್ದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಟ್ರ್ಯಾಕ್ಟರ್ ಎಲ್ಲರೂ ವಾಪಸ್ ಗ್ರಾಮಗಳಿಗೆ ತೆರಳುತ್ತಿದ್ದರು. ಆದರೆ ಚಾಲಕರು ತಾ ಮುಂದು ನೀ ಮುಂದು ಎಂದು ಟ್ರ್ಯಾಕ್ಟರ್ ಚಾಲನೆ ಮಾಡಿದ್ದಾರೆ. ಇದರಿಂದಾಗಿ ಮುಕ್ಕುಂಪಿ ಬಳಿ ಚಾಲಕನೊಬ್ಬನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆ ಬಿಟ್ಟು ಕೆಳಗೆ ಇಳಿದು ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್ ನಲ್ಲಿ ಕುಳಿತ್ತಿದ್ದವರಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. 15ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯವಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಕೂಲಿ ಕೇಳಲು ಬಂದು ನಾಲ್ವರು ಪ್ರಾಣ ಬಿಟ್ಟಿದ್ದಾರೆ. ಸರ್ಕಾರ ಸಮಯಕ್ಕೆ ಸರಿಯಾಗಿ ಕೂಲಿ ಹಣವನ್ನು ಪಾವತಿಸಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ಹೀಗಾಗಿ ಕೂಲಿ ಕಾರ್ಮಿಕರ ಸಾವಿಗೆ ಸರ್ಕಾರವೇ ಹೊಣೆ ಎಂದು ಗಾಯಾಳು ಕೂಲಿ ಕಾರ್ಮಿಕರು ಕಿಡಿಕಾರಿದ್ದಾರೆ. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *