ಮಹಿಷಾ ದಸರಾ ಆಚರಿಸಿದವರಿಗೆ 10 ಪ್ರಶ್ನೆ- ಸರಿ ಉತ್ತರ ನೀಡಿದವರಿಗೆ ನಗದು ಬಹುಮಾನ!

Public TV
2 Min Read

ಬೆಂಗಳೂರು: ಮಹಿಷಾಸುರ ರಾಕ್ಷಸನಲ್ಲ, ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಇದ್ದವನು ಎಂದು ಹೇಳಿ ಮಹಿಷಾ ದಸರಾ ಆಚರಣೆ ಮಾಡಿದ ಚಿಂತಕರಿಗೆ ದಸರಾವನ್ನು ಆಚರಣೆ ಮಾಡುವ ಮಂದಿ ಸಾಮಾಜಿಕ ಜಾಲತಾಣದಲ್ಲಿ ರಸಪ್ರಶ್ನೆಯನ್ನು ಕೇಳಿದ್ದಾರೆ. ಸಂಪೂರ್ಣ ನಂಬಲರ್ಹ ಐತಿಹಾಸಿಕ ದಾಖಲೆಗಳೊಂದಿಗೆ ಸರಿಯುತ್ತರ ಕೊಟ್ಟವರಿಗೆ ಮಾತ್ರ ಘೋಷಿತ 501 ಬಹುಮಾನ ನೀಡಲಾಗುವುದು ಎಂದು ಹೇಳಿದ್ದಾರೆ.

ಬಿಜೆಪಿಯ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ 10 ಪ್ರಶ್ನೆಗಳಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿ, ಚಾಮುಂಡಿ ದಸರಾಗೆ ಸೆಡ್ಡು ಹೊಡೆದು ಮಹಿಷಾ ದಸರಾ ಆಚರಣೆ ಮಾಡಿದ ಚಿಂತಕರಿಗೆ ದಸರಾ ಉತ್ಸವ ಆಚರಿಸುವ ಪಾಮರರು ಕೇಳಿದ ಪ್ರಶ್ನೆ ಎಂದು ಬರೆದುಕೊಂಡಿದ್ದಾರೆ.

ಪ್ರಶ್ನೆ 1. ಮಹಿಷಾಸುರನು ಹುಟ್ಟಿದ ವರ್ಷ ಯಾವುದು?
ಪ್ರಶ್ನೆ 2. ಮಹಿಷಾಸುರ ಪಟ್ಟಾಭಿಷೇಕ ಯಾವ ವರ್ಷದಲ್ಲಿ ನಡೆಯಿತು? ಅಂದು ಆ ಸಮಾರಂಭದಲ್ಲಿ ಯಾವ ಯಾವ ರಾಜ್ಯದ ದೊರೆಗಳು/ಪ್ರತಿನಿಧಿಗಳು ಪಾಲ್ಗೊಂಡಿದ್ದರು?
ಪ್ರಶ್ನೆ 3. ಮಹಿಷಾಸುರನ ರಾಜ್ಯ ಎಲ್ಲಿಂದ ಎಲ್ಲಿಯವರೆಗೆ ಹಬ್ಬಿತ್ತು?

ಪ್ರಶ್ನೆ 4. ಮಹಿಷಾಸುರನ ಪತ್ನಿಯ ಹೆಸರೇನು? ಆಕೆ ಯಾರ/ಯಾವ ರಾಜನ ಮಗಳಾಗಿದ್ದಳು?
ಪ್ರಶ್ನೆ 5. ಮಹಿಷಾಸುರನಿಗೆ ಎಷ್ಟು ಮಕ್ಕಳು? ಆ ಮಕ್ಕಳ ಹೆಸರೇನು?
ಪ್ರಶ್ನೆ 6. ಮಹಿಷಾಸುರನ ಅರಮನೆ ಈಗಿನ ಯಾವ ಸ್ಥಳದಲ್ಲಿತ್ತು?

ಪ್ರಶ್ನೆ 7. ಮಹಿಷಾಸುರನು ಯಾವ ಯಾವ ಯುದ್ಧಗಳನ್ನು ಗೆದ್ದಿದ್ದನು ಮತ್ತು ಯಾವ ಯಾವ ಯುದ್ಧಗಳಲ್ಲಿ ಸೋತಿದ್ದನು?
ಪ್ರಶ್ನೆ 8. ಮಹಿಷಾಸುರನ ಮೃತನಾಗಿದ್ದು ಯಾವ ವರ್ಷದಲ್ಲಿ? ಅವನ ನಂತರ ಆತನ ಉತ್ತರಾಧಿಕಾರಿಯಾಗಿ ಯಾರು ರಾಜ್ಯಭಾರವನ್ನು ವಹಿಸಿಕೊಂಡರು?
ಪ್ರಶ್ನೆ 9. ಬೌದ್ಧ ರಾಜ ಮಹಿಷಾಸುರನನ್ನು ತಮ್ಮ ಪೂರ್ವಜರೆಂದು ಹೇಳಿಕೊಳ್ಳುವ ಇಂದಿನ ಮೂಲ ನಿವಾಸಿಗಳು ಮತ್ತೆ ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದು ಯಾವ ಸಂದರ್ಭದಲ್ಲಿ ಮತ್ತು ಏಕೆ?
ಪ್ರಶ್ನೆ 10. ಕರ್ನಾಟಕದಲ್ಲಿ ಮಹಿಷಾಸುರನು ಆಳಿದ ಕುರುಹಾಗಿ ಇರುವ ಕನಿಷ್ಠ ಹತ್ತು ಐತಿಹಾಸಿಕ ಸ್ಥಳಗಳನ್ನು ಹೆಸರಿಸಿ.

ಕೆಲ ದಿನಗಳ ಹಿಂದೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ.ಕೆ.ಎಸ್ ಭಗವಾನ್, ಮಹಿಷಾಸುರ ರಾಕ್ಷಸನಲ್ಲ, ಆತ ರಾಕ್ಷಸನಾಗಿದ್ದರೆ ಅವನ ಹೆಸರನ್ನೇ ಮೈಸೂರಿಗೆ ಏಕೆ ಇಡುತ್ತಿದ್ದರು? ಮಹಿಷಾಸುರ ಸರ್ವಜನಾಂಗದ ಏಳಿಗೆಗಾಗಿ ಇದ್ದವನು. ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ ಎಂದು ಭಾವಿಸಬೇಕು. ಆದರೆ ಪುರೋಹಿತಶಾಹಿಗಳ ಮಾತು ಕೇಳಿ 1950ರಲ್ಲಿ ಜಯಚಾಮರಾಜ ಒಡೆಯರ್ ಅವರು ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ನಿರ್ಮಾಣ ಮಾಡಿಸಿದರು ಎಂದು ಆರೋಪಿಸಿದ್ದರು.

ಈ ಕೂಡಲೇ ಆ ವಿಗ್ರಹವನ್ನು ತೆಗೆದು ಬೌದ್ದ ಭಿಕ್ಕು ರೂಪದ ಮಹಿಷಾಸುರನ ವಿಗ್ರಹ ಸ್ಥಾಪನೆ ಮಾಡಬೇಕು. ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇವೆ. ಒಂದು ವೇಳೆ ಸರ್ಕಾರ ಈ ಕ್ರಮಕ್ಕೆ ಮುಂದಾಗದಿದ್ದರೆ, ಕಾನೂನು ಹೋರಾಟ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಪ್ರಾಚೀನ ಅಸುರ ರಾಷ್ಟ್ರ ಎನ್ನುವ ಪುಸ್ತಕದಲ್ಲೂ ಮಹಿಷಾಸುರನ ಬಗ್ಗೆ ಉಲ್ಲೇಖವಿದೆ. ನಿಜವಾದ ರಾಕ್ಷಸರು ಪುರೋಹಿತಶಾಹಿಗಳೇ ಹೊರತು ಮಹಿಷಾಸುರನಲ್ಲ ಎಂದು ಕಿಡಿಕಾರಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *