SIT ದಾಳಿ ತಿಳಿದು ತಿಮರೋಡಿ ಎಸ್ಕೇಪ್ – ಅತ್ತ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಮತ್ತೊಂದು ದೂರು

Public TV
4 Min Read

– 2ನೇ ದಿನವೂ ವಿಚಾರಣೆ; ಎಸ್‌ಐಟಿ ಪ್ರಶ್ನೆಗಳಿಗೆ ಸುಜಾತ ಭಟ್ ತಬ್ಬಿಬ್ಬು
– ಧರ್ಮಸ್ಥಳ ವಿರುದ್ಧ ಷ್ಯಡಂತ್ರದ ಆರೋಪ; ವಿಚಾರಣೆ ತೀವ್ರ

ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪದಲ್ಲಿ ಮಹೇಶ್ ತಿಮರೋಡಿ ಮನೆಗೆ ಪೊಲೀಸರು ದಾಳಿ ಮಾಡಿದ್ದಾರೆ. ಆದ್ರೆ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ನಾಪತ್ತೆಯಾಗಿದ್ದು, ಬಂಧನ ಭೀತಿ ಎದುರಾಗಿದೆ. ಈ ನಡುವೆ ಧರ್ಮಸ್ಥಳ ವಿರುದ್ಧ ಷ್ಯಡಂತ್ರದ ಆರೋಪ ಪ್ರಕರಣದಲ್ಲಿ ಗಿರೀಶ್ ಮಟ್ಟಣ್ಣನವರ್ (Girish Mattannavar) ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಮತ್ತೊಂದೆಡೆ ಇಂದು ಕೂಡ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿದ ಸುಜಾತಾ ಭಟ್ ಹೇಳಿಕೆ ದಾಖಲಿಸಿದ್ದಾರೆ.

ಬೆಳಗಿವ ಜಾವವರೆಗೆ ಎಸ್‌ಐಟಿ ಮಹಜರು
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಂದುವರಿಸಿದೆ. ಆರೋಪಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟ ಮಹೇಶ್ ಶೆಟ್ಟಿ ತಿಮರೋಡಿ ಮನೆಯನ್ನು ಎಸ್‌ಐಟಿ (SIT) ಜಾಲಾಡಿದೆ. ಪ್ರಕರಣದ ಆರಂಭದ ದಿನದಿಂದಲೂ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ವಾಸ್ತವ್ಯವಿದ್ದ ಚಿನ್ನಯ್ಯನಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆಯನ್ನ ಮಾಡಲಾಗಿತ್ತು. ಪ್ರಮುಖ ಆರೋಪಿಗೆ ಆಶ್ರಯ ಕೊಟ್ಟ ಆರೋಪದಡಿ ತಿಮರೋಡಿ ಮನೆಯಲ್ಲಿ ಎಸ್‌ಐಟಿ ಶೋಧ ನಡೆಸಿದೆ. ತನಿಖಾಧಿಕಾರಿ ದಯಾಮಾ ನೇತೃತ್ವದಲ್ಲಿ ಶೋಧಕಾರ್ಯ ನಡೆದಿದ್ದು ಚಿನ್ನಯ್ಯ ಮೊಬೈಲ್, ಸಿಸಿಟಿವಿ ಹಾರ್ಡ್‌ಡಿಸ್ಕ್‌ ವಶಕ್ಕೆ ಪಡೆದಿದ್ದು ಸೋಕೋ ಟೀಮ್ ಅದನ್ನ ಎಫ್‌ಎಸ್‌ಎಲ್‌ಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿಕೊಂಡಿದೆ.

ತಿಮರೋಡಿ ಮನೆ ಇಂಚಿಂಚೂ ಜಾಲಾಡಿದ ಎಸ್‌ಐಟಿ
ನಿನ್ನೆ ಉಜಿರೆಯ ತಿಮರೋಡಿ ಮನೆಗೆ ಭೇಟಿ ದಿಢೀರ್ ರೇಡ್ ಮಾಡಿದ್ದ ಬೆಳ್ತಂಗಡಿ ಎಸ್‌ಐಟಿ ತಂಡ ಶೋಧ ನಡೆಸಿತ್ತು. ಎಸ್‌ಐಟಿ ಬರುವ ವಿಷ್ಯ ಸುದ್ದಿ ತಿಳಿದು ಮಹೇಶ್ ತಿಮರೋಡಿ ಮನೆಯಿಂದ ಪರಾರಿಯಾಗಿದ್ದಾರೆ. ತಿಮರೋಡಿ ಮನೆಯಲ್ಲಿ ತಡರಾತ್ರಿವರೆಗೂ ಶೋಧ ಕಾರ್ಯ ನಡೆಸಿರುವ ಎಸ್‌ಐಟಿ ಅಧಿಕಾರಿಗಳು ತಿಮರೋಡಿ ಮನೆಯ ಇಂಚಿಂಚೂ ಶೋಧ ನಡೆಸಿದೆ. ಮನೆಯಲ್ಲಿದ್ದ ತಿಮರೋಡಿ ಪತ್ನಿ, ಪುತ್ರಿಯ ಹೇಳಿಕೆ ದಾಖಲು ಮಾಡಿದೆ. ವಶಕ್ಕೆ ಪಡೆದ ವಸ್ತುಗಳು, ಹೇಳಿಕೆ ಆಧಾರದಲ್ಲಿ ತನಿಖೆಯನ್ನು ಮುಂದುವರಿಸಿದೆ. ಇನ್ನು ಸುಮಾರು 4 ಗಂಟೆ ಕಾಲ ತಿಮರೋಡಿ ಸಹೋದರ ಮೋಹನ್ ಶೆಟ್ಟಿ ನಿವಾಸದಲ್ಲಿ ಮಹಜರು ಮಾಡಿರೋ ಎಸ್‌ಐಟಿ ಇಬ್ಬರು ಸಹೋದರರ ನಿವಾಸದಲ್ಲಿ ಒಟ್ಟು 16 ಗಂಟೆಗಳ ಕಾಲ ಶೋಧ ನಡಿಸಿದೆ. ಅವರ ಮನೆಯಲ್ಲೂ ಲ್ಯಾಪ್‌ಟಾಪ್ ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದ್ದು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಎಸ್‌ಐಟಿ ದಾಳಿ ತಿಳಿದು ತಿಮರೋಡಿ ಎಸ್ಕೇಪ್
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯ ವಾಸ್ತವ್ಯವಿದ್ದ ಕೋಣೆಯಲ್ಲಿ ಆತ ಬಳಸುತ್ತಿದ್ದ ಮೊಬೈಲ್ ಪತ್ತೆಯಾಗಿದೆ. ಎಸ್‌ಐಟಿ ಅಧಿಕಾರಿಗಳು ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಚಿನ್ನಯ್ಯ ಬಳಸುತ್ತಿದ್ದ ವಸ್ತ್ರ, ಆತ ಊರಿಂದ ತಂದಿದ್ದ ಬ್ಯಾಗ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಈ ನಡುವೆ ನಿನ್ನೆ ಎಸ್‌ಐಟಿ ಅಧಿಕಾರಿಗಳು ಬರುವ ವಿಚಾರ ತಿಳಿದು ಮಹೇಶ್ ಶೆಟ್ಟಿ ತಿಮರೋಡಿ ಎಸ್ಕೇಪ್ ಆಗಿದ್ದಾರೆ. ಈವರೆಗೂ ತಿಮರೋಡಿ ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ತಿಮರೋಡಿ ಸಿಗದೇ ಇರೋದ್ರಿಂದ ನೋಟಿಸ್‌ ಕೊಡಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಜೊತೆಗೆ ಸುಳ್ಳು ಬುರುಡೆ ಕೇಸ್‌ನಲ್ಲಿ ಬಂಧನ ಮಾಡೋ ಸಾಧ್ಯತೆಯೂ ಇದೆ.

ಧರ್ಮಸ್ಥಳ ವಿರುದ್ಧ ಷ್ಯಡಂತ್ರದ ಆರೋಪ
ಧರ್ಮಸ್ಥಳ ವಿರುದ್ಧ ಷ್ಯಡಂತ್ರದ ಆರೋಪ ಹೊತ್ತಿರುವ ಗಿರೀಶ್ ಮಟ್ಟಣ್ಣವರ್ ವಿರುದ್ಧ ಬೆಂಗಳೂರಿನಲ್ಲಿ ಮಾನವ ಹಕ್ಕುಗಳ ಆಯೋಗದಲ್ಲಿ ಹಿಂದೂ ಮುಖಂಡ ಸುರೇಶ್ ಗೌಡ ದೂರು ದಾಖಲಿಸಿದ್ದಾರೆ. ಹುಬ್ಬಳ್ಳಿ ಮೂಲದ ರೌಡಿಶೀಟರ್ ಮದನ್ ಬುಗಾಡಿ ಎಂಬಾಂತನನ್ನ ಮಾನವಹಕ್ಕುಗಳ ಆಯೋಗದವರೆಂದು ಧರ್ಮಸ್ಥಳ ಪೊಲೀಸರಿಗೆ ಪರಿಚಯಿಸಿ, ಸುಳ್ಳು ಹೇಳಿದ ಕಾರಣ, ಇಲಾಖೆಯ ಹೆಸರನ್ನ ಸುಳ್ಳು ಹೇಳೋಕೆ ಬಳಸಿಕೊಂಡಿದ್ದಾರೆಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಸಂಬಂಧ ದೂರು ಪಡೆದಿರುವ ಅಧಿಕಾರಿಗಳು ಈ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಎಸ್‌ಐಟಿ ಪ್ರಶ್ನೆಗಳಿಗೆ ಸುಜಾತ ಭಟ್ ತಬ್ಬಿಬ್ಬು
ನಿನ್ನೆ ಕರೆಯದಿದ್ದರೂ ಎಸ್‌ಐಟಿ ಕಚೇರಿಯಲ್ಲಿ ಪ್ರತ್ಯಕ್ಷವಾಗಿದ್ದ ಸುಜಾತ ಭಟ್‌ಗೆ ಎಸ್‌ಐಟಿ ಅಧಿಕಾರಿಗಳು ಸತತ 6 ಗಂಟೆಗಳ ಕಾಲ ಗ್ರಿಲ್ ಮಾಡಿದ್ರು. ಶಿವಮೊಗ್ಗದ ರಿಪ್ಪನ್ ಪೇಟೆ, ಉಡುಪಿಯ ಪರಿಕದ ಪರಿಸರ, ಕೊಡಗಿನ ವಿರಾಜಪೇಟೆ ಲಿಂಕ್ ಸಂಬಂಧ ನಿನ್ನೆ ವಿಚಾರಣೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು ಇಂದು ಮತ್ತೆ ಹಾಜರಾಗಲು ಸೂಚಿಸಿದ್ರು. ಈ ಹಿನ್ನೆಲೆ ಇಂದು ಬೆಳ್ತಂಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿದ ಸುಜಾತ ಭಟ್ ತನಿಖಾಧಿಕಾರಿ ಎಸ್‌ಪಿ ದಯಾಮ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

ಗ್ರಾ.ಪಂ ಪಿಡಿಓಗೆ 2ನೇ ಬಾರಿ ನೋಟಿಸ್
ಧರ್ಮಸ್ಥಳದಲ್ಲಿ ದಾಖಲಾಗಿರೋದು ಯುಡಿಆರ್ ಪ್ರಕರಣಗಳ ದಾಖಲೆ ಪಡೆಯಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಧರ್ಮಸ್ಥಳ ಗ್ರಾಮ ಪಂಚಾಯತಿ ಪಿಡಿಓಗೆ ಎರಡನೇ ಬಾರಿಗೆ ನೋಟಿಸ್ ನೀಡಲಾಗಿದೆ. 1987 ರಿಂದ ಈವರೆಗೆ ಶವಗಳನ್ನ ಮಣ್ಣು ಮಾಡಿರುವ ಬಗ್ಗೆ ದಾಖಲೆ ಕೊಡುವಂತೆ ನೋಟಿಸ್ ನೀಡಲಾಗಿದ್ದು ಈಗಾಗಲೇ ಪಿಡಿಓ ಪಂಚಾಯತಿ ವ್ಯಾಪ್ತಿಯಲ್ಲಿ ದಾಖಲಾಗಿರುವ ಸಾವಿನ ಸಂಖ್ಯೆಯನ್ನ ಹೇಳಿದ್ದು. 38 ವರ್ಷಗಳಲ್ಲಿ, 260ಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಈ ಮೊದಲು ಧರ್ಮಸ್ಥಳ ಗ್ರಾ.ಪಂ ಯಿಂದ 900 ಪುಟಗಳಷ್ಟು ದಾಖಲೆ ಪಡೆದಿದ್ದ ಎಸ್‌ಐಟಿ ಟೀಂ ನಿನ್ನೆ ಎರಡನೇ ಬಾರಿಗೆ ಕೆಲವು ದಾಖಲೆಗಳನ್ನ ಪಡೆದಿದ್ದು. ವಿಚಾರಣೆಗೆ ಬರುವಂತೆ ಗ್ರಾ.ಪಂ ಪಿಡಿಓಗೆ 2ನೇ ಬಾರಿ ನೋಟಿಸ್ ಜಾರಿ ಮಾಡಿದ್ದಾರೆ.

Share This Article