ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆಯೇ ಬಿಜೆಪಿ ಒಳ ಜಗಳ ಬಹಿರಂಗ

Public TV
1 Min Read

ಚಿಕ್ಕೋಡಿ: ಇಷ್ಟು ದಿನ ಒಳಗೊಳಗೇ ನಡೆಯುತ್ತಿದ್ದ ಬಿಜೆಪಿ ನಾಯಕರ ಒಳ ಜಗಳ ಈಗ ಬೀದಿಗೆ ಬಿದ್ದಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆಯೇ ಜಗಳವಾಡಿಕೊಂಡಿದ್ದಾರೆ.

ಚಿಕ್ಕೋಡಿ ಪಟ್ಟಣದ ಕೇಶವ ಸಭಾ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಡಿಸಿಎಂ ಲಕ್ಷ್ಮಣ ಸವದಿ ಅವರ ಜೊತೆ ನಮಗೆ ಹೊಂದಾಣಿಕೆ ಆಗುವುದಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮುಂದೆಯೇ ಅಳಲು ತೋಡಿಕೊಂಡಿದ್ದಾರೆ.

ಕುಮಟಳ್ಳಿ ಅವರು ಈ ರೀತಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದು, ಡಿಸಿಎಂ ಸವದಿ ಹಾಗೂ ನನ್ನ ನಡುವೆ ಹೊಂದಾಣಿಕೆ ಆಗದೆ ಇದ್ದರೂ ಅನಿವಾರ್ಯವಾಗಿ ಪಕ್ಷ ಸಂಘಟನೆ ಮಾಡುತ್ತೇನೆ. ಪಕ್ಷದ ವರಿಷ್ಠರು ಹೇಳಿದ ಎಲ್ಲ ಕಾರ್ಯಗಳನ್ನು ತಪ್ಪದೇ ಮಾಡುತ್ತೇನೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಆಪರೇಷನ್ ಕಮಲದ ದಿನಗಳನ್ನು ವೇದಿಕೆ ಮೇಲೆ ನೆನೆದ ಮಹೇಶ್ ಕುಮಟಳ್ಳಿ, ಆ ದಿನಗಳನ್ನು ನೆನೆಸಿಕೊಂಡರೆ ಅದೇನು ಜಾಣರು ಮಾಡುವ ಕೆಲಸವಲ್ಲ ಎಂದು ಅನ್ನಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲರನ್ನು ಅಧ್ಯಕ್ಷರೇ ಎಂದು ಕೂಗಿ ಹಳೆ ನೆನಪು ಮೆಲುಕು ಹಾಕಿದರು. ಕಾಂಗ್ರೆಸ್ ಬಿಟ್ಟು ಹೊರಗೆ ಬಂದಿರಿ ಆದರೆ ಮುಂದೆ ಏನು ಎಂದು ಜನ ಕೇಳಿದರು ಆಗ ನಾನೂ ಮುಂದೆ ಹೇಗೋ ಎನೋ ಎಂದು ಹೆದರಿದ್ದೆ. ನಂತರ ಬಿಜೆಪಿ ಸೇರಲು ನಿರ್ಧರಿಸಿದೆ. 30 ವರ್ಷ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೆ, ಆದರೆ ಈಗ ಹೇಳುತ್ತಿದ್ದೇನೆ ಸಾಯೋವರೆಗೂ ಬಿಜೆಪಿಯಲ್ಲಿರುತ್ತೇನೆ ಎಂದು ಕುಮಟಳ್ಳಿ ತಮ್ಮ ಭಾಷಣದಲ್ಲಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *