ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ಗೆ ಡಬಲ್ ಶಾಕ್

Public TV
1 Min Read

– ಮಗ ಬಿಜೆಪಿ ಸೇರಿದ, ತಂದೆ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ?

ಮುಂಬೈ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಎಲ್ಲಾ ಪಕ್ಷಗಳು ಭಾರೀ ಸಿದ್ಧತೆ ನಡೆಸಿಕೊಂಡು ಪ್ರಚಾರಕ್ಕೆ ಮುಂದಾಗುತ್ತಿವೆ. ಆದರೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಶಾಕ್ ಮೇಲೆ ಶಾಕ್ ಎದುರಿಸುತ್ತಿದ್ದು, ಭಾರೀ ಚರ್ಚೆಯಾಗುತ್ತಿದೆ.

ಸುಜಯ್ ವಿಖೆ ಪಾಟೀಲ್ ನಿನ್ನೆಯಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಬೆನ್ನಲ್ಲೇ ಸುಜಯ್ ಅವರ ತಂದೆ, ಕಾಂಗ್ರೆಸ್ ಮುಖಂಡ ರಾಧಾಕೃಷ್ಣ ವಿಖೆ ಪಾಟೀಲ್ ಅವರು ಮಹಾರಾಷ್ಟ್ರದ ವಿಧಾನಸಭಾ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಪುತ್ರ ಸುಜಯ್ ಅವರಿಗೆ ಅಹ್ಮದ್‍ನಗರ ಕ್ಷೇತ್ರದ ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ರಾಧಾಕೃಷ್ಣ ಅವರು ಕೇಳಿಕೊಂಡಿದ್ದರು. ಆದರೆ ಅಹ್ಮದ್‍ನಗರ ಕ್ಷೇತ್ರಕ್ಕೆ ಸುಜಯ್ ಕೊಡುಗೆ ಏನು ಎಂದು ಹೈಕಮಾಂಡ್ ಪ್ರಶ್ನಿಸಿ, ಟಿಕೆಟ್ ನಿರಾಕರಿಸಿತ್ತು. ಇದರಿಂದಾಗಿ ಸುಜಯ್ ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಜೆಪಿ ಮುಖಂಡ ಗಿರೀಶ್ ಮಹಾಜನ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

ಪಕ್ಷಕ್ಕೆ ಸೇರಿಕೊಂಡ ಸುಜಯ್ ಅವರಿಗೆ ಅಹ್ಮದ್‍ನಗರ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ. ಈ ಸಂಬಂಧ ಮಾತನಾಡಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು, ಸುಜಯ್ ಅವರ ಹೆಸರನ್ನು ಲೋಕಸಭಾ ಅಭ್ಯರ್ಥಿಗಳ ಪಟ್ಟಿಗೆ ಸೇರಿಸುವಂತೆ ಬಿಜೆಪಿಯ ರಾಜ್ಯ ಪಾರ್ಲಿಮೆಂಟರಿ ಬೋರ್ಡ್ ನಿಂದ ಮನವಿ ಸಲ್ಲಿಸಲಾಗುತ್ತದೆ. ಮನವಿಗೆ ಕೇಂದ್ರ ಪಾರ್ಲಿಮೆಂಟರಿ ಬೋರ್ಡ್ ಒಪ್ಪಿಗೆ ಸೂಚಿಸುತ್ತದೆ ಎನ್ನುವ ಭರವಸೆ ನಮಗಿದೆ ಎಂದು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *