ಸರ್ಕಾರದ ವಿರುದ್ಧ ಬೀದಿಗಿಳಿದ ರೈತರು – ಪ್ರತಿಭಟನೆಯ ಮಾದರಿಯನ್ನು ಶ್ಲಾಘಿಸಿದ ಮಹಾರಾಷ್ಟ್ರ ಸಿಎಂ

Public TV
1 Min Read

ಮುಂಬೈ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಡಳಿತರೂಢ ಬಿಜೆಪಿ ಸರ್ಕಾರ ವಿರುದ್ಧ ಮಹಾರಾಷ್ಟ್ರ ರೈತರು ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆಯ ಮಾದರಿಯನ್ನು ಮಹಾರಾಷ್ಟ್ರ ಸಿಎಂ ಶ್ಲಾಘಿಸಿದ್ದಾರೆ.

ರೈತರ ಪ್ರತಿಭಟನೆ ಕುರಿತು ವಿಧಾನಸಭೆಯಲ್ಲಿ ಪ್ರತಿ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಅವರು, ಮಹಾರಾಷ್ಟ್ರ ರೈತರ ಪ್ರತಿಭಟನೆ ದೇಶಕ್ಕೆ ಮಾದರಿಯಾಗಿದ್ದು, ರೈತರ ಎಲ್ಲಾ ಬೇಡಿಕೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾವುದು ಎಂದು ಆಶ್ವಾಸನೆ ನೀಡಿದ್ದಾರೆ.

ಕಳೆದ ಆರು ದಿನಗಳಿಂದ ಸಾವಿರಾರು ರೈತರು ನಸೀಕ್ ಜಿಲ್ಲೆಯಿಂದ ಮುಂಬೈ ವರೆಗೂ ಸುಮಾರು 180 ಕಿಮೀ ದೂರವನ್ನು `ಕಿಸಾನ್ ಲಾಂಗ್ ಮಾರ್ಚ್’ ಹೆಸರಿನಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಿ ಪ್ರತಿಭಟನೆ ನಡೆಸಿದ್ದರು.

ಪ್ರಸ್ತುತ ಮಹಾರಾಷ್ಟ್ರದಲ್ಲಿ ಸೋಮವಾರ ದಿಂದ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆಗಳು ನಡೆಯುತ್ತಿದ್ದು, ಬೃಹತ್ ರೈತರ ಪ್ರತಿಭಟನೆ ದೈನಂದಿನ ಜೀವನಕ್ಕೆ ಧಕ್ಕೆ ತರುವ ಸಾಧ್ಯತೆ ಇತ್ತು. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಮಾರು 50 ಸಾವಿರಕ್ಕೂ ಅಧಿಕ ರೈತರು ರಾತ್ರಿ ವೇಳೆ, ಯಾವುದೇ ಘೋಷಣೆಗಳನ್ನು ಕೂಗದೆ ತಮ್ಮ ಯಾತ್ರೆಯನ್ನು ಕೈಗೊಂಡಿದ್ದರು. ಈ ಮೂಲಕ ಪರೀಕ್ಷೆ ಎದುರಿಸಲು ಒಂದು ವರ್ಷದಿಂದ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನಡೆದುಕೊಂಡಿದ್ದರು.

ರೈತರು ತಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರೂ ಸಹ ಅವರ ಈ ಕ್ರಮಕ್ಕೆ ಫಡ್ನಾವಿಸ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರೈತರ ಬೇಡಿಕೆಗಳನ್ನು ಪೂರ್ಣಗೊಳಿಸುವ ಭರವಸೆಯನ್ನು ನೀಡಿದ್ದಾರೆ. ರೈತರ ಈ ಮಾದರಿ ಪ್ರತಿಭಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಹಲವರು ಪ್ರತಿಭಟನೆಗೆ ಸಾಥ್ ನೀಡಿ ಟ್ವೀಟ್ ಮಾಡಿದ್ದಾರೆ.

ರೈತರು ಪ್ರಮುಖವಾಗಿ ಸಾಲ ಮನ್ನಾ, ಬೆಳೆ ನಷ್ಟ ಪರಿಹಾರ ಹಾಗೂ ತಾವು ಬೆಳೆಯುವ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುವಂತಹ ಹಲವು ಬೇಡಿಕೆಗಳನ್ನು ಮುಂಡಿಟ್ಟು ಪ್ರತಿಭಟನೆ ನಡೆಸಿದ್ದಾರೆ.

ಈ ಪ್ರತಿಭಟನೆಯೂ ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್) ಹಾಗೂ ಸಿಪಿಐ(ಎಂ) ಪಕ್ಷದ ಮುಂದಾಳತ್ವದಲ್ಲಿ ಕೈಗೊಳ್ಳಲಾಗಿದೆ. ಕೈಯಲ್ಲಿ ಕೆಂಪು ಧ್ವಜ ಹಿಡಿದ ಸಾವಿರರು ರೈತರು ಮುಂಬೈ ತಲುಪಿ ತಮ್ಮ ಸಮಸ್ಯೆಗಳ ಕುರಿತು ಸರ್ಕಾರದ ಗಮನವನ್ನು ಸೆಳೆದಿದ್ದಾರೆ.

 

https://twitter.com/ranveer_78/status/973049081084854273?

Share This Article
Leave a Comment

Leave a Reply

Your email address will not be published. Required fields are marked *