ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳಕ್ಕೆ `ಮಹಾ’ ಸಿಎಂ ಆಕ್ಷೇಪ – ರಾಜ್ಯದ ಹಿತರಕ್ಷಣೆಗೆ ಕೈ ಜೋಡಿಸಲು ಕೇಂದ್ರಕ್ಕೆ ಡಿಕೆಶಿ ಮನವಿ

Public TV
4 Min Read

-ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿ, ಒತ್ತಡ ಹಾಕಲಾಗುವುದು ಎಂದ ಡಿಕೆಶಿ

ಬೆಂಗಳೂರು: ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಂತೆ ನಮ್ಮ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀ.ಗೆ ಹೆಚ್ಚಿಸಬೇಕಿದೆ. ನ್ಯಾಯಧಿಕರಣದ ತೀರ್ಪು ಬಂದಾಗ ಸುಮ್ಮನಿದ್ದ ಮಹಾರಾಷ್ಟ್ರ ಸಿಎಂ ಈಗ ಹಠಾತ್ತನೇ ಕರ್ನಾಟಕದ (Karnataka) ಸಿಎಂ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿರುವುದು ತೀವ್ರ ಆಶ್ಚರ್ಯ ತಂದಿದೆ. ಹೀಗಾಗಿ ಯೋಜನೆ ಜಾರಿ ಮಾಡಿ, ರಾಜ್ಯ ಹಾಗೂ ರೈತರ ಹಿತ ಕಾಯಲು ಎಲ್ಲಾ ಸಂಸದರು, ಕೇಂದ್ರ ಸಚಿವರು ಸಹಕರಿಸಬೇಕು ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DCM D.K Shivkumar) ಅವರು ಮನವಿ ಮಾಡಿದರು.

ಇಂದು ವಿಧಾನಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ನಮ್ಮ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಮೇ 9ರಂದು ಪತ್ರ ಬರೆದಿದ್ದಾರೆ. ಆಣೆಕಟ್ಟೆ ಎತ್ತರ ಹೆಚ್ಚಳ ಮಾಡಿದರೆ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಗಳು ಪ್ರವಾಹ ಸಮಸ್ಯೆ ಎದುರಿಸುತ್ತವೆ. ಹೀಗಾಗಿ ಈ ತೀರ್ಮಾನ ಮರುಪರಿಶೀಲಿಸಿ ಎಂದು ಉಲ್ಲೇಖಿಸಿದ್ದಾರೆ ಎಂದರುಇದನ್ನೂ ಓದಿ: ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು: ಸಿದ್ದರಾಮಯ್ಯ

ಮಹಾರಾಷ್ಟ್ರ ಸಿಎಂ ಅವರ ಈ ಪತ್ರ ನಮಗೆ ಆಘಾತ ತಂದಿದೆ. ಕಾರಣ 2010ರ ತೀರ್ಪಿನ ಬಗ್ಗೆ ಮಹಾರಾಷ್ಟ್ರ ಯಾವತ್ತೂ ಪ್ರಶ್ನೆ ಎತ್ತಿರಲಿಲ್ಲ. ಈ ಯೋಜನೆ ಜಾರಿ ಮಾಡಲಿ ಎಂದು ಮಹಾರಾಷ್ಟ್ರ ಕೂಡ ಅಫಿಡವಿಟ್ ಸಲ್ಲಿಸಿತ್ತು. ಆದರೆ ಈಗ ಇದ್ದಕ್ಕಿದ್ದಂತೆ ಈ ಪತ್ರ ಬರೆದಿದ್ದಾರೆ. ಈ ಯೋಜನೆ ನ್ಯಾಯಾಧಿಕರಣದಲ್ಲಿ ನಮಗೆ ಸಿಕ್ಕಿರುವ ಹಕ್ಕು. ಹೀಗಾಗಿ ನಮ್ಮ ಸಿಎಂ ಸಹ ಒಂದೆರಡು ದಿನಗಳಲ್ಲಿ ಪತ್ರ ಬರೆಯಲಿದ್ದಾರೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು, ಕೇಂದ್ರದ ಸಚಿವರು ಈ ವಿಚಾರವಾಗಿ ನಮಗೆ ಸಹಕಾರ ನೀಡಬೇಕು ಎಂದು ಕೈ ಮುಗಿದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಕೇಂದ್ರ ಸಚಿವ ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಸಚಿವಾಲಯದ ಭಾಗ. ಆಲಮಟ್ಟಿ ಯೋಜನೆ ನಮ್ಮ ರಾಜ್ಯದ ಹಿತ. ನಮಗೆ ನೆರೆ ರಾಜ್ಯಗಳ ಜೊತೆ ತಿಕ್ಕಾಟ ಇಷ್ಟವಿಲ್ಲ. ಈ ಯೋಜನೆ ತಡವಾಗುತ್ತಿರುವುದರಿಂದ ಯೋಜನೆ ವೆಚ್ಚ ವಿಪರೀತ ಏರಿಕೆಯಾಗುತ್ತಿದೆ. ಯೋಜನೆ ಭೂಸ್ವಾಧೀನಕ್ಕೆ 1 ಲಕ್ಷ ಕೋಟಿ ರೂ. ಬೇಕಾಗಿದೆ. ನಮ್ಮ ಪಾಲಿನ ನೀರು ಬಳಸಲು ಈ ಯೋಜನೆ ಮುಖ್ಯ ಎಂದು ಹೇಳಿದರು.

ಮಹಾರಾಷ್ಟ್ರ ಸಮಸ್ಯೆ ಆಂತರಿಕ: ಅವರೇ ಪರಿಹರಿಸಿಕೊಳ್ಳಲಿ:
ಅವರ ರಾಜ್ಯದಲ್ಲಿ ಪ್ರವಾಹ ಎದುರಾದರೆ ಅದನ್ನು ಅವರು ಆಂತರಿಕವಾಗಿ ಸರಿಪಡಿಸಿಕೊಳ್ಳಲಿ. ನಾವು ಈ ವಿಚಾರವಾಗಿ ಕೇಂದ್ರ ಸಚಿವರು ಹಾಗೂ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ, ಒತ್ತಡ ಹಾಕಬೇಕಿದೆ. ಈ ವಿಚಾರದಲ್ಲಿ ನಾವು ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. 2013ರಿಂದ ಈ ಯೋಜನೆಗೆ ಗೆಜೆಟ್ ನೋಟಿಫಿಕೇಶನ್ ಆಗಬೇಕು ಎಂದು ಕಾಯುತ್ತಿದ್ದೇವೆ. ಇನ್ನು ಎಷ್ಟು ದಿನ ಕಾಯಬೇಕು? ಎಂದು ಪ್ರಶ್ನಿಸಿದರು.

ನಮ್ಮ ರೈತರ ಹಿತಕಾಯಲು ನೀವು ಯಾವಾಗ ಎಲ್ಲಿಗೆ ಕರೆಯುತ್ತೀರೋ ಅಲ್ಲಿಗೆ ಬರಲು ನಮ್ಮ ಸರ್ಕಾರ ಸಿದ್ಧವಿದೆ. ಮಹಾರಾಷ್ಟ್ರ ಸಿಎಂ ಹಾಗೂ ಅದಕ್ಕೆ ನಮ್ಮ ಸಿಎಂ ಬರೆಯುವ ಪತ್ರವನ್ನು ಎಲ್ಲಾ ಸಂಸದರಿಗೆ ರವಾನಿಸುತ್ತೇವೆ. ನ್ಯಾಯಾಧಿಕರಣ ತೀರ್ಪಿನ ಅನ್ವಯ ನಮ್ಮ ಪಾಲಿನ ನೀರನ್ನು ಪಡೆಯಲು ಆಲಮಟ್ಟಿ ಅಣೆಕಟ್ಟನ್ನು 524 ಮೀ.ಗೆ ಎತ್ತರಿಸುವ ಯೋಜನೆ ವಿಚಾರವಾಗಿ ನಾನು ಹಾಗೂ ಮುಖ್ಯಮಂತ್ರಿಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೆವು. ಈ ಬಗ್ಗೆ ಸಭೆ ಕರೆದು ಚರ್ಚೆ ಮಾಡಿ, ಅಧಿಸೂಚನೆ ಹೊರಡಿಸಿ ಎಂದು ಮನವಿ ಮಾಡಿದ್ದೆವು ಎಂದರು.

ಕೇಂದ್ರ ಸಚಿವರು ನಮ್ಮ ಮನವಿ ಪರಿಗಣಿಸಿ ಸಭೆಗೆ ದಿನಾಂಕ ನಿಗದಿ ಮಾಡಿದ್ದರು. ಹೀಗಾಗಿ ನಾನು ಸಚಿವರು, ಕಾನೂನು ತಜ್ಞರು ಹಾಗೂ ಆ ಭಾಗದ ಶಾಸಕರ ಜೊತೆ ಆಂತರಿಕ ಸಭೆ ಮಾಡಿ ಸಲಹೆ ಪಡೆದಿದ್ದೆ. ಸಭೆಗೆ ತೆರಳುವಾಗ ಈ ಸಭೆ ಮುಂದೂಡಲಾಗಿದೆ ಎಂದು ಸಂದೇಶ ಬಂದಿತು. ಯುದ್ಧದ ವಾತಾವರಣ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿರಬಹುದು ಎಂದು ಭಾವಿಸಿದ್ದೆ ಎಂದು ತಿಳಿಸಿದರು.

ಮಹಾರಾಷ್ಟ್ರ ಸಿಎಂ ಪತ್ರದ ಹಿಂದೆ ರಾಜಕೀಯ ಇದೆಯೇ ಎಂದು ಕೇಳಿದಾಗ, ಈ ವಿಚಾರ ರಾಜಕೀಯವೋ ಅಲ್ಲವೋ ಎಂಬ ಪ್ರತಿಕ್ರಿಯೆ ನಾನು ನೀಡುವುದಿಲ್ಲ. ನಮ್ಮ ರಾಜ್ಯದ ಹಿತಾಸಕ್ತಿ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಮ್ಮ ಪಾಲಿನ ಹಕ್ಕಿನ ನೀರನ್ನು ಬಳಸಲು ಯೋಜನೆ ಜಾರಿಯಾಗುವುದಷ್ಟೇ ನಮಗೆ ಮುಖ್ಯ. ನಾನು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ನಿಮ್ಮ ಪಾಲಿನ ನೀರನ್ನು ನೀವು ಪಡೆದು, ನಮ್ಮ ಪಾಲಿನ ಹಕ್ಕನ್ನು ಪಡೆಯಲು ನಮಗೆ ಬಿಡಿ ಎಂದು ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ಅವರ ಆಕ್ಷೇಪಕ್ಕೆ ಯಾವ ವೈಜ್ಞಾನಿಕ ನೆಲೆ ಇದೆ ಎಂದು ಕೇಳಿದಾಗ, ಏನೂ ಇಲ್ಲ. ಅವರ ಆಕ್ಷೇಪಗಳ ಬಗ್ಗೆ ನ್ಯಾಯಾಧಿಕರಣದಲ್ಲಿ ಚರ್ಚೆ ಮಾಡಿದ ನಂತರವೇ ತೀರ್ಪು ಬಂದಿದೆ. ಈಗ ಕೇಂದ್ರ ಸರ್ಕಾರದ ಅಧಿಸೂಚನೆ ಮಾತ್ರ ಬಾಕಿ ಇದೆ” ಎಂದರು.ಇದನ್ನೂ ಓದಿ: ಪಾಕ್ ವಿರುದ್ಧ ಯುದ್ಧ ಬೇಡ ಅಂದಿದ್ದ ಸಿಎಂ ಹೇಳಿಕೆ ಖಂಡಿಸಿ ಪೋಸ್ಟ್ – ಹಿಂದೂ ಕಾರ್ಯಕರ್ತನ ವಿರುದ್ಧ ಕೇಸ್

Share This Article