ಮತಾಂತರ ಮಾಡುವವರನ್ನು ಕೊಲ್ಲುವವರಿಗೆ 11 ಲಕ್ಷ ಬಹುಮಾನ – ಮಹಾರಾಷ್ಟ್ರ ಬಿಜೆಪಿ ಶಾಸಕನ ಪ್ರಚೋದನಕಾರಿ ಹೇಳಿಕೆ

Public TV
1 Min Read

ಮುಂಬೈ: ಸಾಂಗ್ಲಿಯಲ್ಲಿ (Sangli) ರುತುಜಾ ರಾಜ್ಗೆ ಆತ್ಮಹತ್ಯೆ ಪ್ರಕರಣವು ಮಹಾರಾಷ್ಟ್ರದಾದ್ಯಂತ ತೀವ್ರ ರಾಜಕೀಯ ಮತ್ತು ಸಾಮಾಜಿಕ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮತಾಂತರ ಮಾಡುವವರನ್ನು ಕೊಲ್ಲುವವರಿಗೆ 11 ಲಕ್ಷ ಬಹುಮಾನ ನೀಡುತ್ತೇನೆ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ಗೋಪಿಚಂದ್ ಪಡಲ್ಕರ್ (GopiChandh Padalkar) ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ರುತುಜಾ ರಾಜ್ಗೆ ಪ್ರಕರಣದಲ್ಲಿ, ಆಕೆಗೆ ಅತ್ತೆ-ಮಾವ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ಒತ್ತಡ ಹೇರಿ, ಕಿರುಕುಳ ನೀಡುತ್ತಿದ್ದರು ಎಂಬ ಆರೋಪಗಳಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಗೋಪಿಚಂದ್ ಪಡಲ್ಕರ್ ಮತ್ತು ಮಾಜಿ ಶಾಸಕ ನಿತಿನ್ ಶಿಂಧೆ ಅವರು ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನನ್ನು ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿ ಮೌನ ಪಂಜಿನ ಮೆರವಣಿಗೆಯಲ್ಲಿ ನೇತೃತ್ವ ವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು, ಮತಾಂತರ ಮಾಡುವವರನ್ನು ಕೊಲ್ಲುವವರಿಗೆ 11 ಲಕ್ಷ ಬಹುಮಾನ ನೀಡುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಏನಿದು ಪ್ರಕರಣ?
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ರುತುಜಾ ರಾಜ್ಗೆ (28) ಜೂ. 6ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ರುತುಜಾ ಅವರ ಪತಿ ಸುಕುಮಾರ್ ರಾಜ್ಗೆ ಕ್ರಿಶ್ಚಿಯನ್ ಧರ್ಮದವರಾಗಿದ್ದರು. ಆದ್ದರಿಂದ ರುತುಜಾ ಅವರಿಗೆ ಅತ್ತೆ-ಮಾವ, ವರದಕ್ಷಿಣೆ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸುತ್ತಿದ್ದುದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬ ಆರೋಪಗಳು ಕೇಳಿಬರುತ್ತಿವೆ.

Share This Article