Maha Kumbhamela | ಜ.29 ರಂದು 10 ಕೋಟಿ ಜನರಿಂದ ಅಮೃತ ಸ್ನಾನ – ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲುಗಳ ಓಡಾಟ

Public TV
1 Min Read

ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ (Mahakumbhamela) ಬುಧವಾರ (ಜ.29) ಮೌನಿ ಅಮವಾಸ್ಯೆ ಹಿನ್ನೆಲೆ 10 ಕೋಟಿ ಜನರು ಅಮೃತ ಸ್ನಾನದಲ್ಲಿ ಭಾಗಿಯಾಗುವ ಸಾಧ್ಯತೆಯಿದ್ದು, ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲು ಕಾರ್ಯನಿರ್ವಹಿಸಲಿವೆ.

ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ದಲ್ಲಿ (Prayagraj) ಜನವರಿ 13 ರಿಂದ ಮಹಾಕುಂಭಮೇಳ ನಡೆಯುತ್ತಿದ್ದು, ದೇಶ-ವಿದೇಶದಿಂದ ಕೋಟ್ಯಂತರ ಜನರು ಆಗಮಿಸುತ್ತಿದ್ದಾರೆ. ಮಹಾಕುಂಭಮೇಳ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ತ್ರಿವೇಣಿ ಸಂಗಮದಲ್ಲಿ 15 ಕೋಟಿ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.ಇದನ್ನೂ ಓದಿ: ಯಶ್ ನನ್ನ ಗೆಳೆಯ – ದುಬೈ ಅಭಿಮಾನಿಗಳ ಮುಂದೆ ಶಾರುಖ್ ಖಾನ್ ಮಾತು

ಈ ಕುರಿತು ಭಾರತೀಯ ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಬುಧವಾರ ಮೌನಿ ಅಮಾವಾಸ್ಯೆ ಸಂದರ್ಭದಲ್ಲಿ ಮಹಾಕುಂಭಮೇಳಕ್ಕೆ ಸುಮಾರು 10 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಭಕ್ತರ ಅನುಕೂಲಕ್ಕಾಗಿ 60 ವಿಶೇಷ ರೈಲುಗಳು ಸೇರಿ ಈಗಾಗಲೇ ನಿಗದಿಯಾಗಿರುವ ರೈಲುಗಳ ಪೈಕಿ ಒಟ್ಟು 190 ವಿಶೇಷ ರೈಲುಗಳು ಸಂಚರಿಸಲಿವೆ. ಇನ್ನೂ ಆ ಮಾರ್ಗದಲ್ಲಿ 110 ಸಾಮಾನ್ಯ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಪ್ರಯಾಗ್‌ರಾಜ್‌ನಿಂದ ಪ್ರತಿ 4 ನಿಮಿಷಕ್ಕೆ ಒಂದರಂತೆ ರೈಲು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.

ಇನ್ನೂ ರೈಲು ನಿಲ್ದಾಣಗಳಲ್ಲಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, ಪ್ರತಿ ನಿಮಿಷವೂ ಕೂಡ ಅವರಿಂದ ಅಪಡೇಟ್‌ಗಳನ್ನು ಪಡೆದುಕೊಳ್ಳುತ್ತಿರುತ್ತೇವೆ. ಜ.29 ಕನಿಷ್ಠ 10 ಕೋಟಿ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 8,000 ದಿಂದ 10,000 ಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಮೌನಿ ಅಮಾವಾಸ್ಯೆಯ ಶುಭ ಸಂದರ್ಭವನ್ನು ಬುಧವಾರ ಬೆಳಿಗ್ಗೆ 6:45ಕ್ಕೆ ಹೆಲಿಕಾಪ್ಟರ್‌ಗಳಿಂದ ಪುಷ್ಪವೃಷ್ಟಿ ಮಾಡಲು ಉತ್ತರ ಪ್ರದೇಶ ಸರ್ಕಾರ ಯೋಜಿಸಿದೆ.ಇದನ್ನೂ ಓದಿ: ‘ಗೌರಿ’ ಹೀರೋ ಸಮರ್ಜಿತ್‌ಗೆ ಸಿಕ್ತು ಉದಯೋನ್ಮುಖ ನಟ ಪ್ರಶಸ್ತಿ

 

Share This Article