ಅತ್ತಿಗೆಯನ್ನು ಕೊಲ್ಲಲು ಮನೆಕೆಲಸದವರಿಗೆ ಸುಪಾರಿ – ಜೈಲು ಸೇರಿದ ಮೈದುನ

Public TV
1 Min Read

ಮಡಿಕೇರಿ: ತಂದೆ ಮಾಡಿರುವ ಅಪಾರ ಆಸ್ತಿಯನ್ನು ತಾನೊಬ್ಬನೇ ಕಬಳಿಸಬೇಕೆಂಬ ದುರಾಸೆಯಿಂದ ಅಣ್ಣನ ಹೆಂಡತಿಯನ್ನೇ ಕೊಲೆ ಮಾಡಲು ಸುಪಾರಿ ಕೊಡಲು ಮುಂದಾಗಿದ್ದ ಮೈದುನನೋರ್ವ ಪೊಲೀಸರ ಅಥಿತಿಯಾಗಿದ್ದಾನೆ.

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೇಲಾವಾರದಲ್ಲಿ ಘಟನೆ ನಡೆದಿದೆ. ಚೇಲಾವರದಲ್ಲಿರುವ 70 ಎಕರೆ ಕಾಫಿ ಎಸ್ಟೇಟ್ ಮತ್ತು ಎರಡು ಹೋಂ ಸ್ಟೇಗಳನ್ನು ತಾನೇ ಕಬಳಿಸಬೇಕು ಎನ್ನುವ ದುರಾಸೆಗೆ ಬಿದ್ದಿದ್ದ ಆರೋಪಿ ಸುಬ್ಬಯ್ಯ, ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಕಾರ್ಮಿಕರಿಗೆ 5 ಲಕ್ಷ ಕೊಡುತ್ತೇನೆ ತನ್ನ ಅತ್ತಿಗೆಯನ್ನ ಕೊಲೆ ಮಾಡಿ ಬಿಡಿ ಸುಪಾರಿ ಕೊಟ್ಟಿದ್ದಾನೆ.

ಆದರೆ ಇದನ್ನು ಒಪ್ಪದ ಅಸ್ಸಾಂ ಕಾರ್ಮಿಕರು ಅವರ ಮನೆಯನ್ನೇ ಬಿಟ್ಟುಹೋಗಲು ರೆಡಿಯಾಗಿದ್ದಾರೆ. ಈ ಕಾರಣದಿಂದ ಸಿಟ್ಟಿಗೆದ್ದ ಸುಬ್ಬಯ್ಯ ಕಾರ್ಮಿಕರ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಗಳನ್ನು ಕಿತ್ತುಕೊಂಡು ಕೊಡೋದಿಲ್ಲ ಎಂದು ಧಮ್ಕಿ ಹಾಕಿದ್ದಾನೆ. ಇದರಿಂದ ಹೆದರಿದ ಅಸ್ಸಾಂ ಕಾರ್ಮಿಕರು ಕೊಡಗಿನ ಎಸ್‍ಪಿಗೆ ದೂರು ನೀಡಿದ್ದಾರೆ.

ಅಷ್ಟೇ ಅಲ್ಲದೇ ಅಣ್ಣನ ಹೆಂಡತಿ ರೇಖಾ ಪೂವಯ್ಯ ಅವರನ್ನು ಮುಗಿಸಲು ಅನೇಕ ದಿನಗಳಿಂದ ಪ್ಲಾನ್ ಮಾಡುತ್ತಿದ್ದಾನೆ ಎಂದು ರೇಖಾ ಪೂವಯ್ಯ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅತ್ತಿಗೆಯನ್ನೇ ಮುಗಿಸಲು ಸುಪಾರಿ ನೀಡಲು ಮುಂದಾಗಿದ್ದ ಸುಬ್ಬಯ್ಯನನ್ನು ಬಂಧಿಸಿದ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *