ಕಾಮಗಾರಿ ನಡೆದ 1 ವಾರಕ್ಕೆ ಡಾಂಬರ್ ಹೋಯ್ತು – ಮತ್ತೆ ಅಪ್ಪಚ್ಚು ರಂಜನ್‍ರಿಂದ ಗುದ್ದಲಿ ಪೂಜೆ

Public TV
1 Min Read

ಮಡಿಕೇರಿ: ಕಾಮಗಾರಿ ಮಾಡಿದ ಒಂದೇ ವಾರಕ್ಕೆ ಡಾಂಬರು ಕಿತ್ತು ಹೋದ ಹಿನ್ನೆಲೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಅದೇ ರಸ್ತೆಗೆ ಮತ್ತೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೊತ್ತನಹಳ್ಳಿಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಂದುವರೆ ಕಿಲೋಮೀಟರ್ ಉದ್ದದ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ 80 ಲಕ್ಷ ಅನುದಾನ ಬಳಸಿ ವಾರದ ಹಿಂದೆ ಅಷ್ಟೇ ಕಾಮಗಾರಿ ಮಾಡಿತ್ತು. ಎನ್‍ಎಸ್‍ಆರ್ ಸಂಸ್ಥೆಯ ಗುತ್ತಿಗೆದಾರ ರಾಜೇಂದ್ರ ಅವರು ವಾರದ ಹಿಂದೆ ಅಷ್ಟೇ ರಸ್ತೆ ಡಾಂಬರೀಕರಣ ಮಾಡಿದ್ದರು.

ಈ ಡಾಂಬರೀಕರಣ ಸಂಪೂರ್ಣ ಕಳಪೆಯಾಗಿದ್ದು ಡಾಂಬರು ಕಿತ್ತು ಬರುತ್ತಿತ್ತು. ಹೀಗಾಗಿ ಆ ಗ್ರಾಮದ ಜನರು ಶಾಸಕರಿಗೆ ಈ ಕುರಿತು ದೂರು ನೀಡಿದ್ದರು. ಇಂದು ಸ್ಥಳಕ್ಕೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದು ಖಚಿತವಾಗಿದೆ. ಹೀಗಾಗಿ ಆ ರಸ್ತೆಗೆ ಅಪ್ಪಚ್ಚು ರಂಜನ್ ಅವರು ಮತ್ತೆ ಗುದ್ದಲಿ ಪೂಜೆ ಮಾಡಿದರು.

ಕಾಮಗಾರಿ ಸಂಪೂರ್ಣ ಕಳಪೆ ಆಗಿರುವುದರಿಂದ ಮತ್ತೆ ಡಾಂಬರೀಕರಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಅಲ್ಲದೇ ಪಿಡಬ್ಲ್ಯುಡಿ ಇಲಾಖೆ ಇಂಜಿನಿಯರ್ ರಾಮಣ್ಣ ಅವರಿಗೂ ಕರೆಮಾಡಿ ಮತ್ತೆ ರಸ್ತೆ ನಿರ್ಮಾಣ ಮಾಡುವಂತೆ ಸೂಚಿಸಿದರಲ್ಲದೆ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *