ಮೂರು ರಾಜ್ಯಗಳಿಗೆ ಯಾರಾಗ್ತಾರೆ ಮುಖ್ಯಮಂತ್ರಿ..? ಯುವಕರೋ, ಹಿರಿಯರೋ ರಾಹುಲ್ ನಿರ್ಧಾರ

Public TV
2 Min Read

ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬಂದಿದ್ದು, ಮೀಜೋರಾಂ ಮತ್ತು ತೆಲಂಗಾಣದಲ್ಲಿ ಪ್ರದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಉಳಿದಂತೆ ರಾಜಸ್ಥಾನ ಮತ್ತು ಛತ್ತೀಸ್‍ಗಢದಲ್ಲಿ ಕಾಂಗ್ರೆಸ್ ಬಹುಮತ ಪಡೆದಿದೆ. ಮಧ್ಯಪ್ರದೇಶದಲ್ಲಿ ಬಿಎಸ್‍ಪಿ ಸಹಾಯ ಪಡೆದು ಕಾಂಗ್ರೆಸ್ ಸರ್ಕಾರ ರಚನೆಗೆ ಮುಂದಾಗಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಯಾರನ್ನು ಸಿಎಂ ಅಭ್ಯರ್ಥಿಯನ್ನಾಗಿ ಮಾಡುತ್ತೆ ಎಂಬ ಕುತೂಹಲ ಹುಟ್ಟುಹಾಕಿದೆ.

ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದಂತೆ ಸಿಎಂ ಸ್ಥಾನದ ಆಕಾಂಕ್ಷಿಗಳು ಹೈಕಮಾಂಡ್ ಮಟ್ಟದಲ್ಲಿ ಲಾಬಿಗೆ ಮುಂದಾಗುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಈ ಬಾರಿ ಯುವ ಪೀಳಿಗೆಯವರೋ ಅಥವಾ ಹಿರಿಯ ನಾಯಕರೋ? ಯಾರು ಎಂಬುವುದನ್ನು ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿ ಇತರೆ ನಾಯಕರೊಂದಿಗೆ ಚರ್ಚಿಸಿ ನಿರ್ಧರಿಸಲಿದ್ದಾರೆ. ಮೂರು ರಾಜ್ಯದ ಕಾಂಗ್ರೆಸ್ ಅಂಗಳದಲ್ಲಿ ಕೆಲವು ಹೆಸರುಗಳು ಹರಿದಾಡುತ್ತಿವೆ.

ಮಧ್ಯಪ್ರದೇಶ ಸಿಎಂ ಯಾರು?
ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ 72 ವರ್ಷದ ಕಮಲ್‍ನಾಥ್ ಅವರ ಕೇಳಿಬರುತ್ತಿದೆ. ಮಾಜಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಅನುಭವವನ್ನು ಹೊಂದಿರುವ ಕಮಲ್‍ನಾಥ್ ಹಾಲಿ ಲೋಕಸಭಾ ಸದಸ್ಯರಾಗಿದ್ದಾರೆ. ಚಿಂದವಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ 9 ಬಾರಿ ಸಂಸದರಾಗಿ ಆಯ್ಕೆಯಾಗಿ ಬಂದಿದ್ದಾರೆ. ಗ್ವಾಲಿಯರ್ ಲೋಕಸಭೆ ಸಂಸದ 47 ವರ್ಷದ ಜ್ಯೋತಿರಾದಿತ್ಯ ಸಿಂಧಿಯಾ ಸಹ ಸಿಎಂ ಆಕಾಂಕ್ಷಿಯಾಗಿದ್ದಾರೆ. ಈ ಹಿಂದೆ ಕೇಂದ್ರ ಸಚಿವರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಅವರು ರಾಹುಲ್ ಗಾಂಧಿ ಪರಮಾಪ್ತರಲ್ಲಿ ಒಬ್ಬರಾಗಿದ್ದಾರೆ.

ರಾಜಸ್ಥಾನ ಸಿಎಂ ಯಾರು?
1998, 2008ರಲ್ಲೂ ಸಿಎಂ ಆಗಿದ್ದ 67 ವರ್ಷದ ಅಶೋಕ್ ಗೆಹ್ಲೋಟ್ ಅವರು ಸಿಎಂ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂದಿದ್ದಾರೆ. ಸರ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ರಾಜಸ್ಥಾನದ ಬಂಡಾಯ ಶಾಸಕರು ಅತ್ಯಾಪ್ತರಾಗಿದ್ದಾರೆ. ಇತ್ತ 41 ವರ್ಷದ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿರುವ ಸಚಿನ್ ಪೈಲಟ್ ಹೆಸೆರು ಸಿಎಂ ರೇಸ್ ನಲ್ಲಿದೆ. ಈ ಹಿಂದೆ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದು, ರಾಹುಲ್ ಗಾಂಧಿಯವರ ಅತ್ಯಾಪ್ತರಲ್ಲಿ ಒಬ್ಬರಾಗಿದ್ದಾರೆ.

ಛತ್ತೀಸ್‍ಗಢ್ ಸಿಎಂ ಯಾರು?
ಹಿಂದುಳಿದ ಸಾಹು ಸಮುದಾಯದ ನಾಯಕರಾಗಿರುವ 69 ವರ್ಷದ ತಮರ್‍ಧ್ವಜ್ ಸಾಹು ಸಿಎಂ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ. ರಾಜ್ಯದ ಏಕೈಕ ಕಾಂಗ್ರೆಸ್ ಸಂಸದರಾಗಿದ್ದಾರೆ. ಅಂಬಿಕಾಪುರ ಶಾಸಕರಾಗಿರುವ 66 ವರ್ಷದ ಟಿ.ಎಸ್. ಸಿಂಗ್ ದಿಯೋ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದಿಯೋ ಸದ್ಯ ವಿಧಾನಸಭೆ ವಿಪಕ್ಷ ನಾಯಕರಾಗಿದ್ದಾರೆ. ಛತ್ತೀಸ್‍ಗಢ ಕಾಂಗ್ರೆಸ್ ಅಧ್ಯಕ್ಷರಾಗಿರುವ 57 ವರ್ಷದ ಭುಪೇಶ್ ಬಗೇಲ್ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. 2003ರಿಂದಲೂ ಶಾಸಕರಾಗಿರುವ ಮಧ್ಯ ಪ್ರದೇಶದಲ್ಲಿ ಸಚಿವರು ಆಗಿದ್ದರು. ಪಕ್ಷ ಸಂಘಟನೆಯ ಪ್ರಮುಖ ನಾಯಕರಾಗಿದ್ದಾರೆ.

ಈ ಎಲ್ಲರ ಹೆಸರುಗಳು ಸಿಎಂ ಸ್ಥಾನದ ಆಕಾಂಕ್ಷಿ ಸ್ಥಾನದಲ್ಲಿದ್ದಾರೆ. ಪಕ್ಷದ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರ ತೀರ್ಮಾನವೇ ಅಂತಿಮ ಎಂದು ಹೇಳಲಾಗುತ್ತಿದೆ. ದೇಶದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಾಣದ ಪೈಪೋಟಿ, ನಿರೀಕ್ಷಿಸದ ಅಚ್ಚರಿ ಬೆಳವಣಿಗೆಗೆ ಮಧ್ಯಪ್ರದೇಶ ಮತ ಎಣಿಕೆ ಸಾಕ್ಷಿಯಾಗಿತ್ತು. ಸದ್ಯ ಆಪರೇಷನ್ ಕಮಲ ಸದ್ದು ಕೇಳಿಬಂದಿದ್ದು, ಕೇಂದ್ರ ಸಚಿವ ತೋಮರ್ ಭೋಪಾಲ್‍ನಲ್ಲಿ ಬಿಡಾರ ಹೂಡಿದ್ದಾರೆ. ಸರ್ಕಾರ ರಚನೆಗೆ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪಕ್ಷೇತರ ಮತ್ತು ಎಸ್‍ಪಿ, ಬಿಎಸ್ ಪಿ ಶಾಸಕರನ್ನು ಸೆಳೆಯಲು ಬಿಜೆಪಿ ತೆರೆಮರೆಯಲ್ಲಿ ಕೆಲಸ ಮಾಡಲಾಗುತ್ತಿದೆ ಎನ್ನಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *