ಕಾಂಕ್ರೀಟ್ ಮಿಕ್ಸರ್ ಟ್ಯಾಂಕ್‍ನಲ್ಲಿ ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ ಬಂದ ಕಾರ್ಮಿಕರು

Public TV
1 Min Read

– ಉಸಿರಾಡಲು ಆಗದ ಕತ್ತಲೆ ಟ್ಯಾಂಕ್ ಒಳಗೆ 18 ಮಂದಿ ಕಾರ್ಮಿಕರು

ಭೋಪಾಲ್: ಕಾಂಕ್ರೀಟ್ ಮಿಕ್ಸರ್ ಟ್ಯಾಂಕ್ ಒಳಗೆ ಮಹಾರಾಷ್ಟ್ರದಿಂದ ಮಧ್ಯ ಪ್ರದೇಶಕ್ಕೆ ಬಂದ ಕೂಲಿ ಕಾರ್ಮಿಕರು ಇಂದೋರ್ ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಕೊರೊನಾ ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಇಡೀ ಭಾರತವನ್ನೇ ಲಾಕ್‍ಡೌನ್ ಮಾಡಿದೆ. ಇದಾದ ನಂತರ ಕೂಲಿ ಮಾಡಲು ಬೇರೆ ಬೇರೆ ರಾಜ್ಯಕ್ಕೆ ಹೋಗಿದ್ದ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಜೊತೆಗೆ ಪೊಲೀಸರ ಕಣ್ಣು ತಪ್ಪಿಸಿ ಹಲವರು ತಮ್ಮ ತಮ್ಮ ಗ್ರಾಮಗಳಿಗೆ ಅಕ್ರಮವಾಗಿ ಹೋಗಲು ಯತ್ನಿಸಿ ಸಿಕ್ಕಿಬಿದ್ದಿದ್ದರು.

ಆದರೆ ಈಗ ಕಾಂಕ್ರೀಟ್ ಮಿಕ್ಸರ್ ಟ್ಯಾಂಕ್ ಒಳಗೆ ಬರೋಬ್ಬರಿ 18 ಜನರು ಅಕ್ರಮವಾಗಿ ಮಹಾರಾಷ್ಟ್ರದಿಂದ ಲಕ್ನೋಗೆ ಹೊರಟಿದ್ದಾರೆ. ಈ ವೇಳೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ. ಆಗ ನಿಲ್ಲುವುದಕ್ಕೂ, ಉಸಿರಾಡುವುದಕ್ಕೂ ಜಾಗವಿಲ್ಲದ ಆ ಮಿಕ್ಸರ್ ಟ್ಯಾಂಕ್‍ವೊಳಗೆ 18 ಜನರು ಇರುವುದು ಕಂಡು ಬಂದಿದೆ. ಸದ್ಯ ಟ್ಯಾಂಕ್‍ಗೆ ಇರುವ ಸಣ್ಣ ಕಂಡಿಯಲ್ಲೇ ನುಸುಳಿಕೊಂಡು ಕಾರ್ಮಿಕರು ಇಳಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಇಂದೋರ್ ಚೆಕ್‍ಪೋಸ್ಟ್ ನಲ್ಲಿ ಅನುಮಾನಗೊಂಡ ಪೊಲೀಸರು ವಾಹನವನ್ನು ತಡೆದಿದ್ದು, ಟ್ಯಾಂಕ್ ಒಳಗೆ ಜನರು ಇದ್ದರು. ಈ ವೇಳೆ ಅವರನ್ನು ಕೆಳಗೆ ಇಳಿಯಲು ಹೇಳಿದಾಗ ಅದರೊಳಗೆ 18 ಜನ ಇರುವುದು ಕಂಡುಬಂದಿದೆ. ಆ ವಾಹವನ್ನು ಹತ್ತಿರದ ಪೊಲೀಸ್ ಠಾಣೆ ವಶಕ್ಕೆ ನೀಡಲಾಗಿದೆ. ಜೊತೆಗೆ ಅವರ ಮೇಲೆ ದೂರು ದಾಖಲಾಗಿದೆ ಎಂದು ಡಿಎಸ್‍ಪಿ ಉಮಾಕಾಂತ್ ಚೌಧರಿ ಹೇಳಿದ್ದಾರೆ.

ಮಾರ್ಚ್ 25ರಂದು ಲಾಕ್‍ಡೌನ್ ದೇಶದಲ್ಲಿ ಜಾರಿಯಾದ ಮೇಲೆ ಕೂಲಿ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹೋಗಲು ಪರದಾಡುವ ಪರಿಸ್ಥಿತಿ ಎದುರುರಾಗಿತ್ತು. ಕೆಲವರು ಇದ್ದಲ್ಲಿಯೇ ಉಳಿದರೆ ಇನ್ನೂ ಕೆಲ ಕಾರ್ಮಿಕರು ನಡೆದುಕೊಂಡು ತಮ್ಮ ಊರುಗಳನ್ನು ಸೇರಿಕೊಂಡರು. ಆದರೆ ಬಹಳಷ್ಟ ಮಂದಿ ಅಕ್ರಮವಾಗಿ ಸ್ವಗ್ರಾಮಗಳಿಗೆ ಹೋಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಈಗ ಸರ್ಕಾರಗಳೇ ವಲಸೆ ಕಾರ್ಮಿಕರನ್ನು ಅವರ ಊರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *