ಭೋಪಾಲ್: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಕ್ಕಳ ತಜ್ಞ ಡಾ.ಪ್ರವೀಣ್ ಸೋನಿ ಜಾಮೀನು ಅರ್ಜಿಯನ್ನು ಮಧ್ಯಪ್ರದೇಶ (Madhya Pradesh) ಜಿಲ್ಲಾ ನ್ಯಾಯಾಲಯ ನಿರಾಕರಿಸಿದೆ.
ಮಧ್ಯಪ್ರದೇಶ ಜಿಲ್ಲಾ ನ್ಯಾಯಾಲಯ ಮಂಗಳವಾರ (ಅ.14) ಡಾ.ಪ್ರವೀಣ್ ಸೋನಿ (Dr.Praveen Soni) ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ತನಿಖೆಯ ಸಂದರ್ಭದಲ್ಲಿ ಔಷಧಿ ಶಿಫಾರಸು ಮಾಡಿದ್ದಕ್ಕಾಗಿ 10% ಕಮಿಷನ್ ಪಡೆದಿರುವುದಾಗಿ ಡಾ.ಪ್ರವೀಣ್ ಸೋನಿ ಒಪ್ಪಿಕೊಂಡಿದ್ದಾರೆ. ಜೊತೆಗೆ ಸಿರಪ್ ಸೇವಿಸಿದ ಮಕ್ಕಳು ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರೂ ಕೂಡ ಡಾ.ಸೋನಿ ಸೇರಿದಂತೆ ಇತರ ವೈದ್ಯರುಗಳು ಸಿರಪ್ ಶಿಫಾರಸು ಮಾಡುವುದನ್ನು ನಿಲ್ಲಿಸಿರಲಿಲ್ಲ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಸ್ರೇಸನ್ ಲೈಸೆನ್ಸ್ ರದ್ದು, ಕಂಪನಿ ಬಂದ್
ಪ್ರಕರಣ ಸಂಬಂಧ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದ್ದು, ಕೆಮ್ಮಿನ ಸಿರಪ್ ಶಿಫಾರಸು ಮಾಡಿದ ನಂತರ ಕನಿಷ್ಠ ಏಳು ಮಕ್ಕಳು ಸಾವನ್ನಪ್ಪಿದರೆ, ಇನ್ನೂ ಆರು ಮಕ್ಕಳು ನಾಗ್ಪುರ ಆಸ್ಪತ್ರೆಯಲ್ಲಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಿರಪ್ನ್ನು ಚಿಕ್ಕ ಮಕ್ಕಳಿಗೆ ನೀಡಬಾರದು ಎಂದು ತಿಳಿದಿದ್ದರೂ ಕೂಡ ಡಾ.ಸೋನಿಯವರು ಆ.24ರಿಂದ ಅ.4ರವರೆಗೆ ಹಲವು ಮಕ್ಕಳಿಗೆ ಸಿರಪ್ ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಸಿರಪ್ ಶಿಫಾರಸು ಮಾಡಿದ ಬಳಿಕ ಆ.29ರಂದು ಮೊದಲ ಮಗು ಸಾವನ್ನಪ್ಪಿತು. ಅದಾದ ನಂತರ ಸೆ.5ರಂದು 3 ವರ್ಷದ ಬಾಲಕಿ ಮೂತ್ರಪಿಂಡ ವೈಫಲ್ಯದೊಂದಿಗೆ ಸಾವನ್ನಪ್ಪಿದ್ದಳು ಎಂದು ತಿಳಿಸಿದ್ದಾರೆ.
2023ರ ಡಿಸೆಂಬರ್ 18ರಂದು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸ್ಥಿರ ಡೋಸ್ ಹೊಂದಿರುವ ಔಷಧಿಗಳನ್ನು ನೀಡಬಾರದು ಎಂದು ಸಲಹೆ ನೀಡಿತ್ತು. ಈ ನಿರ್ದೇಶನದ ಹೊರತಾಗಿಯೂ ಡಾ.ಸೋನಿ ಮಕ್ಕಳಿಗೆ ಸಿರಪ್ನ್ನು ಶಿಫಾರಸು ಮಾಡಿದ್ದಾರೆ. ಮಕ್ಕಳ ಸಾವಿನ ತನಿಖೆಗಾಗಿ ನ್ಯಾಯಾಲಯ ಜಾಮೀನು ಅರ್ಜಿ ನಿರಾಕರಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳ ಸಾವು ಕೇಸ್ – ಚೆನ್ನೈನ 7 ಸ್ಥಳಗಳ ಮೇಲೆ ಇಡಿ ದಾಳಿ