70ರ ವೃದ್ಧನನ್ನು ಮದ್ವೆಯಾದ 40ರ ಆಂಟಿ- 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ

Public TV
2 Min Read

– ಕಥೆ ಕಟ್ಟಿ ವೃದ್ಧನನ್ನು ವಂಚಿಸಿದ್ದ ದಂಪತಿ ಅಂದರ್

ಭೋಪಾಲ್: 70 ವರ್ಷದ ನಿವೃತ್ತ ಸಹಾಯಕ ಎಂಜಿನಿಯರ್ ಜೊತೆಗೆ ಮದುವೆಯಾದ 40 ವರ್ಷದ ಮಹಿಳೆಯೊಬ್ಬಳು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಆರೋಪಿಗಳಾದ ರಾಣಿ ಮಿಶ್ರಾ ಹಾಗೂ ಶಂಕರ್ ದುಬೆ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರಿಂದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ಏನಿದು ಪ್ರಕರಣ:
ಭೋಪಾಲ್‍ನ ಕೋಲಾರ್ ರಸ್ತೆಯ ನಿವಾಸಿ 70 ವರ್ಷದ ನಿವೃತ್ತ ಎಂಜಿನಿಯರ್ ಅವರ ಪತ್ನಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದರು. ಅವರಿಗೆ ಓರ್ವ ಮಗನಿದ್ದು, ಬೇರೋಂದು ರಾಜ್ಯದಲ್ಲಿ ವಾಸವಿದ್ದಾರೆ. ಹೀಗಾಗಿ ಏಕಾಂಗಿಯಾಗಿರುವ ಅವರು ಕೆಲವು ದಿನಗಳ ಹಿಂದೆ ಪತ್ರಿಕೆಯಲ್ಲಿ ವಧುವಿಗಾಗಿ ಜಾಹೀರಾತನ್ನು ಹಾಕಿದ್ದರು. ಅದಾದ ಎರಡು ದಿನಗಳ ನಂತರ, ನಿವೃತ್ತ ಎಂಜಿನಿಯರ್ ಮನೆಗೆ ಶಂಕರ್ ದುಬೆ ಎಂಬ ವ್ಯಕ್ತಿ ಬಂದಿದ್ದ. ಈ ವೇಳೆ ಆರೋಪಿ ಶಂಕರ್, ತಾನು ಪನ್ನಾ ಜಿಲ್ಲೆಯ ಭಿತಾರ್ವಾರ್ ಗ್ರಾಮದಿಂದ ಬಂದಿದ್ದಾಗಿ, ನನ್ನ ಮನೆಯ ಹತ್ತಿರ ಸುಮಾರು 40 ವರ್ಷ ವಯಸ್ಸಿನ ಅವಿವಾಹಿತ ರಾಣಿ ಮಿಶ್ರಾ ಎಂಬ ಬಡ ಮಹಿಳೆ ವಾಸಿಸುತ್ತಿದ್ದಾಳೆ. ಆಕೆಯನ್ನು ನೀವು ಮದುವೆಯಾಗಬಹುದು ಎಂದು ತಿಳಿಸಿದ್ದ.

ರಾಣಿ ಮಿಶ್ರಾ ಚಿಕ್ಕವಳಿದ್ದಾಗ ಹಸುವೊಂದು ಆಕೆಯ ಹೊಟ್ಟೆಗೆ ಕೊಂಬಿನಿಂದ ತಿವಿದಿತ್ತು. ಹೀಗಾಗಿ ಅವಳು ತಾಯಿಯಾಗಲು ಸಾಧ್ಯವಾಗಲಿಲ್ಲ ಎಂಬುದು ಗೊತ್ತಾಗಿತ್ತು. ಇದರಿಂದಾಗಿ ಆಕೆಯನ್ನು ಯಾರೂ ಮದುವೆಯಾಗಲು ಮುಂದೆ ಬರಲಿಲ್ಲ. ನೀವು ಅವನನ್ನು ಒಪ್ಪಿಕೊಂಡರೆ ಅವಳಿಗೂ ಒಂದು ಜೀವನ ಸಿಗುತ್ತದೆ ಎಂದು ಶಂಕರ್ ದುಬೆ ಕಥೆ ಕಟ್ಟಿದ್ದ.

ಶಂಕರ್ ದುಬೆ ಮಾತು ನಂಬಿದ್ದ ನಿವೃತ್ತ ಎಂಜಿನಿಯರ್, ರಾಣಿ ಮಿಶ್ರಾಳನ್ನು ಮದುವೆಯಾಗಲು ಒಪ್ಪಿಕೊಂಡಿದ್ದರು. ಅದರಂತೆ ಆರೋಪಿಗಳು ಫೆಬ್ರವರಿ 19ರಂದು ನಿವೃತ್ತ ಎಂಜಿನಿಯರ್ ಮನೆಗೆ ಬಂದು ಉಳಿದಿದ್ದರು. ಫೆಬ್ರವರಿ 20 ರಂದು ವಿವಾಹ ಕೂಡ ಮುಗಿದಿತ್ತು. ರಾಣಿ ಮೇಲೆ ನಂಬಿಕೆ ಇಟ್ಟಿದ್ದ ವೃದ್ಧ ತಮ್ಮ ಮೊದಲ ಹೆಂಡತಿಯ ಚಿನ್ನಾಭರಣವನ್ನು ಆಕೆಗೆ ನೀಡಿದ್ದರು.

ಮದುವೆಯ ಬಳಿಕ, ರಾಣಿಗೆ ಫೋನ್ ಕರೆ ಬಂದಿತ್ತು. ಫೋನ್‍ನಲ್ಲಿ ಮಾತನಾಡಿದ ಬಂದ ರಾಣಿ ‘ನಮ್ಮ ತಾಯಿಯ ಆರೋಗ್ಯವು ಹದಗೆಟ್ಟಿದೆ. ನಾನು ನಮ್ಮ ಮನೆಗೆ ಹೋಗಬೇಕು ಎಂದು ನಿವೃತ್ತ ಎಂಜಿನಿಯರ್‌ಗೆ ಹೇಳಿ ಹೊರಟಿದ್ದಳು. ಆಗ ಅವರು ಆಕೆಯನ್ನು ತಡೆದು, ಖರ್ಚಿಗಾಗಿ 7 ಸಾವಿರ ರೂ. ಕೊಟ್ಟು ಕಳುಹಿಸಿದ್ದರು. ಅಷ್ಟೇ ಅಲ್ಲದೆ ಆರೋಪಿ ರಾಣಿ ಚಿನ್ನಾಭರಣ ಧರಿಸಿ ಶಂಕರ್ ಜೊತೆ ಅಲ್ಲಿಂದ ಪರಾರಿಯಾಗಿದ್ದಳು. ಹಳ್ಳಿಯನ್ನು ತಲುಪಿ ಎಂಜಿನಿಯರ್ ಗೆ ಫೋನ್ ಮಾಡಿ, ನಮ್ಮ ತಾಯಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಳು. ಜೊತೆಗೆ ತಾಯಿಯ ಅಂತ್ಯಕ್ರಿಯೆಗೆ 40 ಸಾವಿರ ರೂಪಾಯಿ ಬೇಕು. ಶಂಕರ್ ಬರುತ್ತಾರೆ ಅವರಿಗೆ ಕೊಟ್ಟು ಕಳುಹಿಸಿ, ನಾನು 13 ದಿನ ಬಿಟ್ಟು ಬರುತ್ತೇನೆ ಎಂದು ಹೇಳಿದ್ದಳು. ಅದರಂತೆ ಶಂಕರ್ ನಿವೃತ್ತ ಎಂಜಿನಿಯರ್ ಮನೆಗೆ ಹೋಗಿ 40 ಸಾವಿರ ರೂ ಪಡೆದು ಅಲ್ಲಿಂದ ಬಂದಿದ್ದ.

13 ದಿನ ಕಳೆದರೂ ರಾಣಿ ಮಿಶ್ರಾ ಬಾರದೆ ಇದ್ದಾಗ ನಿವೃತ್ತ ಎಂಜಿನಿಯರ್ ಪನ್ನಾ ಜಿಲ್ಲೆಯ ಭಿತಾರ್ವಾರ್ ಗ್ರಾಮಕ್ಕೆ ಹೋಗಿ ವಿಚಾರಿಸಿದ್ದ. ಆಗ ಆರೋಪಿಗಳು ಕಥೆ ಕಟ್ಟಿ ತಮ್ಮಿಂದ ಹಣ ಹಾಗೂ ಚಿನ್ನಾಭರಣ ದೋಚಿರುವುದು ಖಚಿತವಾಗಿತ್ತು. ತಕ್ಷಣವೇ ಭೋಪಾಲ್ ಪೊಲೀಸರಿಗೆ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *