ಉಡುಪಿ: ಬಾನೆತ್ತರದಲ್ಲಿ ಆಚಾರ್ಯ ಮಧ್ವರು ವಿರಾಜಮಾನ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ

Public TV
3 Min Read

ಉಡುಪಿ: ಮೂರು ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಆಚಾರ್ಯ ಮಧ್ವರ 32 ಅಡಿ ಎತ್ತರದ ಏಕಶಿಲಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಮಧ್ವಾಚಾರ್ಯರು ಹುಟ್ಟಿ- ಓಡಾಡಿದ ಜಾಗ ಉಡುಪಿ ಜಿಲ್ಲೆಯ ಪಾಜಕ ಕ್ಷೇತ್ರದಲ್ಲಿ. ಇಲ್ಲಿಗೆ ಸಮೀಪದ ಕುಂಜಾರುಗಿರಿಯ ತಪ್ಪಲು ಪ್ರದೇಶದಲ್ಲಿ ಮಧ್ವಾಚಾರ್ಯರ ಏಕಶಿಲಾ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

40 ಅಡಿ ಎತ್ತರದ ಪೀಠದ ಮೇಲೆ 10 ಅಡಿ ಎತ್ತರದ ಪದ್ಮಪೀಠ ರಚನೆ ಮಾಡಲಾಗಿದ್ದು, ಅದರ ಮೇಲೆ ಮಧ್ವಾಚಾರ್ಯರ ಏಕಶಿಲಾ ಮೂರ್ತಿಯನ್ನು ನಿಲ್ಲಿಸಲಾಗಿದೆ. ಬೃಹತ್ ಮೂರ್ತಿಯ ಹಿಂಭಾಗದಲ್ಲಿ ದುರ್ಗಾದೇವಿ ದೇವಸ್ಥಾನ, ಮುಂಭಾಗದಲ್ಲಿ ಪರಶುರಾಮ ಬೆಟ್ಟವಿದ್ದು ಎರಡು ಬೆಟ್ಟಗಳ ಮಧ್ಯೆ ಮಧ್ವಾಚಾರ್ಯರು ವಿರಾಜಮಾನರಾಗಿ ನಿಂತಿದ್ದಾರೆ.

ಮೂರು ಕೋಟಿ ವೆಚ್ಚ: ಎತ್ತರದಲ್ಲಿ ನಿಂತಿರುವ ಭಂಗಿಯಲ್ಲಿರುವ ಆಚಾರ್ಯರ ಮೂರ್ತಿ ಎಲ್ಲರನ್ನೂ ಸೆಳೆಯುತ್ತಿದೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಮೂರ್ತಿಯನ್ನು ನಿರ್ಮಾಣ ಮಾಡಿದ್ದು, ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿ ಇದರ ನೇತೃತ್ವ ವಹಿಸಿದ್ದಾರೆ. ಅದಮಾರು ಮಠ ಮತ್ತು ಸ್ಥಳೀಯರ ಸಹಕಾರದಿಂದ ಸುತ್ತಲಿನ ಜಮೀನನ್ನು ಖರೀದಿಸಿ ಈ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಉಡುಪಿಗೆ ಬರುವ ಧಾರ್ಮಿಕ ಪ್ರವಾಸಿಗರಿಗೆ ಮಧ್ವಮೂರ್ತಿಯ ವಿಶೇಷ ದರ್ಶನ ಸಿಗಲಿದೆ.

ಕೃಷ್ಣಮಠ ಸ್ಥಾಪಿಸಿದ ಆಚಾರ್ಯರು: ಉಡುಪಿ ಅಂದ್ರೆ ಎಲ್ಲರಿಗೂ ನೆನಪಾಗೋದು ಕಡೆಗೋಲು ಶ್ರೀಕೃಷ್ಣ. ಕಡೆಗೋಲು ಶ್ರೀಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪನೆ ಮಾಡಿದವರು ಮಧ್ವಾಚಾರ್ಯರು. ಹೀಗಾಗಿ ಮಧ್ವಾಚಾರ್ಯರ ಜನ್ಮಸ್ಥಾನದಲ್ಲಿ ಆಚಾರ್ಯರ ಬೃಹತ್ ಪುತ್ಥಳಿ ಸ್ಥಾಪನೆ ಮಾಡಬೇಕೆಂಬ ಅಭಿಲಾಷೆಯಿಂದ ಈ ಕಾರ್ಯಕ್ಕೆ ಪಲಿಮಾರು ಮಠ ಈ ಯೋಜನೆಯನ್ನು ಹಾಕಿಕೊಂಡಿತ್ತು. ಮುಂದಿನ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಯವರ ಹಲವು ಕನಸುಗಳಲ್ಲಿ ಇದೂ ಒಂದಾಗಿತ್ತು.

ಮಧ್ವಾಚಾರ್ಯರು ನೋಡಲು ಅತೀ ಸುಂದರವಾಗಿದ್ದರು. ಆಚಾರ್ಯರನ್ನು ಹನುಮ-ಭೀಮರ ಅವತಾರ ಎಂಬ ನಂಬಿಕೆಯಿದೆ. ಶಿಲ್ಪಿಯೊಬ್ಬರಿಗೆ ಮಧ್ವರೇ ಕಲ್ಪನಾ ಮೂರ್ತಿ. 32 ಲಕ್ಷಣಗಳು ಮಧ್ವರ ದೇಹದಲ್ಲಿತ್ತು. ಅದನ್ನು ಜಗತ್ತಿಗೆ ತೋರಿಸುವ ಸಲುವಾಗಿ 32 ಅಡಿ ಎತ್ತರ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಸಂತ್ರಸಾರದ ಲಕ್ಷಣಗಳನ್ನು ಒಳಗೊಂಡಂತೆ ಮೂರ್ತಿಯನ್ನು ಕೆತ್ತಲಾಗಿದೆ. ಆಚಾರ್ಯರು ನಮ್ಮೆಲ್ಲರನ್ನು ಮತ್ತು ನಾವು ಆಚಾರ್ಯರನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಿದೆ ಎಂದು ಪಲಿಮಾರು ಮಠಾಧೀಶ ವಿದ್ಯಾಧೀಶರು ಹೇಳಿದ್ದಾರೆ.

ಮೂರ್ತಿ ಕೆತ್ತಿದ್ದು ಯಾರು..?: ದೇಶಾದ್ಯಂತ ಹಲವು ಬೃಹತ್ ಮೂರ್ತಿಗಳನ್ನು ಕೆತ್ತಿರುವ ಹಿರಿಯ ಹಾಗೂ ಪ್ರಸಿದ್ಧ ಶಿಲ್ಪಿ ಅಶೋಕ್ ಗುಡಿಗಾರು ಮತ್ತು ತಂಡ ಈ ಸುಂದರ ಶಿಲ್ಪದ ಕೆತ್ತನೆಯನ್ನು ಮಾಡಿದೆ. ಚೆನ್ನೈನ ಎಲ್ ಆಂಡ್ ಟಿ ಕಂಪನಿಯ ಇಂಜಿನಿಯರ್‍ಗಳು ಮತ್ತು ಸಿಬ್ಬಂದಿ . ಸುಮಾರು 32 ತಿಂಗಳುಗಳ ಕಾಲ ಸುಂದರ ಮೂರ್ತಿ ಪ್ರತಿಷ್ಠಾಪಿಸುವ ಕಾರ್ಯದಲ್ಲಿ ತೊಡಗಿದ್ದರು. ಸಾವಿರಾರು ಮಂದಿ ಸ್ಥಳೀಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಅಮೇರಿಕನ್ ಟೆಕ್ನಾಲಜಿ: ಮಲಗಿದ್ದ ಮಧ್ವಾಚಾರ್ಯರ ಮೂರ್ತಿಯನ್ನು ಎದ್ದು ನಿಲ್ಲಿಸಲು ಅಮೇರಿಕಾದ ಕ್ರೈನ್ ಬಳಸಲಾಯ್ತು. ಚೆನ್ನೈನ ಎಲ್ ಆಂಡ್ ಟಿ ಕಂಪನಿಯ ಇಂಜಿನಿಯರ್‍ಗಳು- ಕಾರ್ಮಿಕರು ಮೂರು ದಿನ ಈ ಕಾರ್ಯದಲ್ಲಿ ತೊಡಗಿದರು. ಬೃಹತ್ ಕ್ರೈನ್‍ಗಳು, ರೋಡ್ ರೋಲರ್, ಜೆಸಿಬಿ, ಕಬ್ಬಿಣದ ರೋಪ್‍ಗಳ ಸಹಿತ ಹತ್ತಕ್ಕೂ ಹೆಚ್ಚು ಇಂಜಿನಿಯರ್‍ಗಳು, ಸುಮಾರು 25 ಸಿಬ್ಬಂದಿ ಮೂರ್ತಿ ಎತ್ತಿ, ಪೀಠದ ಮೇಲೆ ಪ್ರತಿಷ್ಠಾಪಿಸುವಲ್ಲಿ ತೊಡಗಿದ್ದರು.

ಡ್ರೋನ್ ಮೂಲಕ ಪಕ್ಷಿನೋಟ: ಎರಡು ಬೆಟ್ಟಗಳು- ಸುತ್ತಲೂ ಹಚ್ಚ ಹಸುರಿನ ಕಾಡು. ಈ ನಡುವೆ ಮಧ್ವಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಡ್ರೋನ್ ಕ್ಯಾಮೆರಾ ದೃಶ್ಯ ಮತ್ತು ಫೋಟೋಗಳನ್ನು, ಸುತ್ತಲ ರಮಣೀಯ ಪರಿಸರವನ್ನು ಸೆರೆಹಿಡಿದಿದ್ದು ನೋಡಲು ಸುಂದರ- ನಯನ ಮನೋಹರವಾಗಿದೆ.

ಉಡುಪಿಯ ಪಲಿಮಾರು ಮಠ ಈ ಮೂರ್ತಿ ಮೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಮೂರ್ತಿಯ ಕೆಳಭಾಗದಲ್ಲಿ ಮುಂದಿನ ದಿನಗಳಲ್ಲಿ ಮುಂದಿ ದಿನಗಳಲ್ಲಿ ಧ್ಯಾನ- ಭಜನೆ, ಪ್ರವಚನಗಳು ನಡೆಯಲಿದೆ. ಕುಂಜಾರು ಗಿರಿಯ ತಪ್ಪಲಿನಲ್ಲಿ ಉದ್ಯಾನವನ ಸ್ಥಾಪನೆ ಮಾಡಲಿದ್ದು ಮಧ್ವಾಚಾರ್ಯರಿಗೆ ದಿನವೂ ಪೂಜೆ ಪುನಸ್ಕಾರ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *