ಮಾಸ್ತಿಗುಡಿ ದುರಂತ: ಪೊಲೀಸರಿಂದ 6 ಜನರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

Public TV
1 Min Read

ರಾಮನಗರ: ಮಾಸ್ತಿಗುಡಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಡಿಸಿಐಬಿ  ಪೊಲೀಸರು ಮಾಗಡಿಯ 1 ನೇ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಪ್ರಕರಣದ ಆರು ಜನರ ಮೇಲೆ 450 ಪುಟಗಳ ಜಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ಧಾರ್ಥ್, ಸಾಹಸ ನಿರ್ದೇಶಕ ರವಿವರ್ಮ, ಯೂನಿಟ್ ಮ್ಯಾನೇಜರ್ ಭರತ್, ಹಾಗೂ ಹೆಲಿಕಾಪ್ಟರ್ ಚಾಲಕ ಪ್ರಕಾಶ್ ಬಿರಾದಾರ್ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಆರು ಜನ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಟ್ಟು 81 ಜನ ಸಾಕ್ಷಿದಾರರ ಹೇಳಿಕೆಯನ್ನು ಚಾರ್ಜ್ ಶೀಟ್ ನಲ್ಲಿ ದಾಖಲು ಮಾಡಲಾಗಿದೆ.

ಅಪಾಯ ಸಂಭವಿಸಬಹುದು ಎಂದು ಗೊತ್ತಿದ್ದು ಅಪಾಯಕ್ಕೆ ತಳ್ಳಿದ ಹಿನ್ನೆಲೆಯಲ್ಲಿ ಐಪಿಸಿ 304(ಉದ್ದೇಶಪೂರ್ವಕವಲ್ಲದ ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ವಿಚಾರಣೆ ಮೇ17 ಕ್ಕೆ ಮುಂದೂಡಿದ್ದು ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಗೆ ಆರು ಜನ ಆರೋಪಿಗಳು ಸಹ ಹಾಜರಾಗಬೇಕಿದೆ.

ಏನಿದು ಪ್ರಕರಣ:
ಮಾಸ್ತಿಗುಡಿ ಚಿತ್ರದಲ್ಲಿ ಅನಿಲ್ ಮತ್ತು ಉದಯ್ ಖಳನಟರಾಗಿ ಅಭಿನಯಿಸುತ್ತಿದ್ದರು. ನವೆಂಬರ್ 7, 2016ರಂದು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ನಡೆದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಹೆಲಿಕಾಪ್ಟರ್ ನಿಂದ ಅನಿಲ್, ಉದಯ್, ದುನಿಯ ವಿಜಿ ಜಿಗಿದಿದ್ದರು. ದುನಿಯ ವಿಜಿ ಅವರನ್ನು ತೆಪ್ಪದ ಮೂಲಕ ರಕ್ಷಣೆ ಮಾಡಿದ್ದರೆ, ಅನಿಲ್ ಮತ್ತು ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಜಲಸಮಾಧಿಯಾಗಿದ್ದ ಇಬ್ಬರ ಮೃತದೇಹ 48 ಗಂಟೆಯ ಬಳಿಕ ಪತ್ತೆಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *