ಮತ್ತೆ ಡಿಕೆಶಿ ವಿರುದ್ಧ ಪರೋಕ್ಷ ಸಿಟ್ಟು ಹೊರಹಾಕಿದ ಎಂಬಿಪಿ

Public TV
1 Min Read

ವಿಜಯಪುರ: ಗೃಹ ಖಾತೆ ಒಂದು ಪ್ರತಿಷ್ಠೆಯ ಖಾತೆ. ಮುಖ್ಯಮಂತ್ರಿ ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಖಾತೆ. ಆದರೆ ನನ್ನ ಹೃದಯದಲ್ಲಿರುವುದು ನೀರು. ಖಾತೆ ಹಂಚಿಕೆ ವಿಚಾರದಲ್ಲಿ ನನಗೂ ಮೋಸವಾಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಖಾತೆ ಹಂಚಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾತೆ ಹಂಚಿಕೆಯಲ್ಲಿ ನನಗೆ ಮೋಸವಾಯ್ತು. ನನ್ನ ಹೃದಯದಲ್ಲಿರುವುದು ನೀರು ಎಂದು ಹೇಳುವ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಎಂಬಿಪಿ ಮತ್ತೆ ಪರೋಕ್ಷವಾಗಿ ಸಿಟ್ಟು ಹೊರಹಾಕಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಎಂಬಿಪಿ ಜಲಸಂಪನ್ಮೂಲ ಸಚಿವರಾಗಿದ್ದರು. 2ನೇ ಹಂತದ ಸಚಿವ ಸಂಪುಟ ವಿಸ್ತರಣೆ ವೇಳೆ ಎಂಬಿಪಿಗೆ ಗೃಹ ಖಾತೆ ಸಿಕ್ಕಿತ್ತು.

ವಿಜಯಪುರದ ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಎಂ.ಬಿ. ಪಾಟೀಲ್ ಬಬಲೇಶ್ವರ ಮತಕ್ಷೇತ್ರದ ಹೊನವಾಡ ಹಾಗೂ ಕನಮಡಿ ಗ್ರಾಮದಲ್ಲಿ ಮತಯಾಚನೆ ಮಾಡಿದರು. ನಂತರ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಹೋರಾಟ ನನ್ನ ಅಸ್ಮಿತೆ. ಆದರೆ ಹೋರಾಟವನ್ನು ಹತ್ತಿಕ್ಕಲು ನಕಲಿ ಬಿಎಲ್‍ಇ ಲೇಟರ್ ಸೃಷ್ಟಿಸಿ ಹೇಸಿಗೆ ಬರುವಂತಹ ಕೆಲಸ ಕೆಲ ಲಫಂಗರು ಮಾಡಿದ್ದಾರೆ ಎಂದು ಗುಡುಗಿದರು.

ನನ್ನ ಮೈಯಲ್ಲಿರುವ ಹರಿಯುತ್ತಿರುವುದು ಎಂ.ಬಿ ಪಾಟೀಲ್ ರಕ್ತ. ನಾನು ಚಿಲ್ಲರೆ ಕೆಲಸ ಮಾಡುವುದಿಲ್ಲ. ಇನ್ನು ಸ್ವಾಭಿಮಾನ, ನನ್ನ ಚರಿತ್ರೆಗೆ ಧಕ್ಕೆ ಬಂದರೆ ರಾಜಕೀಯದಲ್ಲಿ ಇರುವುದಿಲ್ಲ ಎಂದರು. ಅಲ್ಲದೇ, ಬಬಲೇಶ್ವರ ಮತಕ್ಷೇತ್ರದಲ್ಲಿ ಎಷ್ಟು ಮತಗಳನ್ನು ನನಗೆ ನೀಡಿದ್ದೀರಿ ಅದಕ್ಕಿಂತ ಒಂದು ಹೆಚ್ಚು ಮತವನ್ನು ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಸುನೀತಾ ಚವ್ಹಾಣ ಅವರಿಗೆ ನೀಡಬೇಕು ಎಂದು ಎಂ.ಬಿ ಪಾಟೀಲ್ ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *